ಮಂಡ್ಯ(ಸೆ.27): ನಾಡಿನ ಜೀವನಾಡಿ ಕೆಆರ್ಎಸ್ ಜಲಾಶಯ ಹಿಂದೆದೂ ಕಾಣದ ರೀತಿ ಬರಿದಾಗಿದೆ. 49.45 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ಇರೋದು, ಕೇವಲ 10.2 ಟಿಎಂಸಿ ನೀರು.
ಕಳೆದ 47 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆಆರ್ಎಸ್ನ ನೀರಿನ ಮಟ್ಟ ತಳಕಂಡಿದೆ. 1969ರಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದಾಗ 10 ಟಿಎಂಸಿಯಷ್ಟು ನೀರು ಇತ್ತು. ಈಗ ಇಂಥದ್ದೇ ಸ್ಥಿತಿ ಮರುಕಳಿಸಿದೆ.
ಸುಪ್ರೀಂಕೋರ್ಟ್ ಆದೇಶ ಮತ್ತು ಕಾವೇರಿ ಉಸ್ತುವಾರಿ ಸಮಿತಿ ಆದೇಶ ಪಾಲನೆ ಮಾಡಲು ಮುಂದಾದ ಸರಕಾರ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಈ ಸ್ಥಿತಿ ಬಂದಿದೆ. ಈಗ ಉಳಿದಿರುವ ನೀರನ್ನು ಮುಂದಿನ ವರ್ಷದ ಜೂನ್ವರೆಗೆ ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕಾಗಿದೆ.
ಹಿಂಗಾರು ಮಳೆ ಕೈಕೊಟ್ಟರೆ ಕಾವೇರಿಯನ್ನೇ ಅವಲಂಭಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಲಕ್ಷಾಮ ಎದುರಾಗಲಿದೆ. ಬೆಂಗಳೂರು, ಮೈಸೂರು ಮತ್ತಿತರ ನಗರಗಳಿಗೆ ಕುಡಿಯುವ ಉದ್ದೇಶಕ್ಕಾಗಿ ತಿಂಗಳಿಗೆ 2 ಟಿಎಂಸಿಯಷ್ಟು ನೀರು ಅಗತ್ಯವಿದೆ. ಸದ್ಯ ಜಲಾಶಯದ ಒಳಹರಿವು 1185 ಕ್ಯೂಸೆಕ್ನಷ್ಟಿದ್ದು, ಹೊರ ಹರಿವು 200 ಕ್ಯೂಸೆಕ್ನಷ್ಟಿದೆ.