ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಡ್ರಾಮಾ ಮುಂದುವರಿದಿದೆ. ಇದೇ ವೇಳೆ ಸಚಿವ ಸತಿಶ್ ಜಾರಕಿಹೊಳಿ ಮಾತುಗಳು ಭರವಸೆ ಕಳೆದುಕೊಂಡಂತಿವೆ.
ಬೆಂಗಳೂರು [ಜು.20]: ಅತೃಪ್ತ ಶಾಸಕರು ಸದನಕ್ಕೆ ವಾಪಸ್ ಬರುತ್ತಾರೆ ಎಂಬ ಬಗ್ಗೆ ತಮಗೆ ವಿಶ್ವಾಸ ಇಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಮುಂಬೈಗೆ ತೆರಳಿರುವ ಶಾಸಕರು ಮತ್ತೆ ಸದನಕ್ಕೆ ಬರುತ್ತಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿಲ್ಲ. ಆದರೆ, ಕಳೆದ 14 ತಿಂಗಳ ಸಮ್ಮಿಶ್ರ ಸರ್ಕಾರದ ಕೆಲಸಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಹೇಳಿದ್ದಾರೆ.
ಅತೃಪ್ತ ಶಾಸಕರ ಗುಂಪಿನಲ್ಲಿರುವ ರಮೇಶ್ ಜಾರಕಿಹೊಳಿ ತಮ್ಮ ಸಂಪರ್ಕದಲ್ಲಿ ಇಲ್ಲ, ಅತೃಪ್ತ ಶಾಸಕರ ಬಗ್ಗೆ ಅವರ ಸಂಬಂಧಿಕರು ದೂರು ನೀಡಬಹುದು ಎಂದು ಹೇಳಿದರು.