‘ಶಾಸಕರ ರಾಜೀನಾಮೆ ಅಂಗೀಕರಿಸದ ಸ್ಪೀಕರ್‌ ನಡೆ ಕಾನೂನುಬದ್ಧವಾಗಿಲ್ಲ’

Published : Jul 10, 2019, 10:52 AM ISTUpdated : Jul 10, 2019, 10:56 AM IST
‘ಶಾಸಕರ ರಾಜೀನಾಮೆ ಅಂಗೀಕರಿಸದ ಸ್ಪೀಕರ್‌ ನಡೆ ಕಾನೂನುಬದ್ಧವಾಗಿಲ್ಲ’

ಸಾರಾಂಶ

ಸ್ಪೀಕರ್‌ ನಡೆ ಕಾನೂನುಬದ್ಧವಾಗಿಲ್ಲ: ಬಿ.ವಿ. ಆಚಾರ್ಯ | ಇಂದಿನ ರಾಜಕೀಯ ಬಿಕ್ಕಟ್ಟಿಗೆ ಸ್ಪೀಕರ್‌ ನಡವಳಿಕೆ ಕಾರಣ: ಮಾಜಿ ಎ.ಜಿ. ಅಭಿಮತ | ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಅಂದರೆ ಏನು ಲೋಪವಿದೆ ಎಂದು ಹೇಳಬೇಕಿತ್ತು ಎಂದು ಬಿ ವಿ ಆಚಾರ್ಯ ಪ್ರಶ್ನಿಸಿದ್ಧಾರೆ 

ಬೆಂಗಳೂರು (ಜು. 10):  ಪರಿಶೀಲನೆ ನೆಪವೊಡ್ಡಿ ಶಾಸಕರ ರಾಜೀನಾಮೆ ಪರಿಶೀಲನೆ ವಿಳಂಬ ಮಾಡುತ್ತಿರುವ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ನಡೆ ಕಾನೂನುಬದ್ಧವಾಗಿಲ್ಲ ಹಾಗೂ ಇಂದಿನ ರಾಜಕೀಯ ಬಿಕ್ಕಟ್ಟಿಗೆ ಸ್ಪೀಕರ್‌ ಅವರು ಈ ನಡವಳಿಕೆಯೇ ಮೂಲ ಕಾರಣ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ‘ಕನ್ನಡಪ್ರಭ’ ಜೊತೆಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್‌ ಹೇಳಿದ್ದಾರೆ. ಆದರೆ, ರಾಜೀನಾಮೆ ಪತ್ರದಲ್ಲಿ ನಿಖರವಾಗಿ ಯಾವ ಲೋಪದೋಷವಿದೆ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ನಿಯಮಗಳ ಪ್ರಕಾರ ಯಾವ ಲೋಪವಿದೆ ಎಂದು ಸ್ಪಷ್ಟಪಡಿಸಬೇಕಿತ್ತು ಎಂದರು.

ಅಲ್ಲದೆ, ಶಾಸಕರು ರಾಜೀನಾಮೆ ನೀಡಿರುವ ಪ್ರಕರಣಗಳಲ್ಲಿ ಸ್ಪೀಕರ್‌ ಅವರು ವಿಳಂಬ ಮಾಡುವುದಕ್ಕೆ ಅವಕಾಶವೇ ಇಲ್ಲ. ಇಂದಿನ ರಾಜಕೀಯ ಬಿಕ್ಕಟ್ಟಿಗೆ ಮೂಲ ಕಾರಣವೇ ಸ್ಪೀಕರ್‌. ಸಭಾಧ್ಯಕ್ಷರು ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ. ಆದರೆ, ರಾಜೀನಾಮೆಯನ್ನು ಅಂಗೀಕರಿಸದೆ ಸುದೀರ್ಘ ವಿಚಾರಣೆ ನಡೆಸುವ ಮಾದರಿಯಲ್ಲಿ ಪ್ರಕರಣವನ್ನು ವಿವಿಧ ದಿನಗಳಿಗೆ ನಿಗದಿಗೊಳಿಸಿ ಮತ್ತಷ್ಟುಸಂಕೀರ್ಣಗೊಳಿಸಿದ್ದಾರೆ ಎಂದು ಹೇಳಿದರು.

ತಿರಸ್ಕಾರಕ್ಕೆ ಎರಡೇ ಕಾರಣ!:

ಮೇಲಾಗಿ ಕೇವಲ ಎರಡು ಕಾರಣಗಳಿಂದ ಸ್ಪೀಕರ್‌ ಅವರು ಶಾಸಕರು ನೀಡಿದ ರಾಜೀನಾಮೆ ಪತ್ರವನ್ನು ತಿರಸ್ಕರಿಸಬಹುದು. ಒಂದು ರಾಜೀನಾಮೆ ಪತ್ರ ನಕಲಿಯಾಗಿದ್ದರೆ, ಮತ್ತೊಂದು ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡದಿದ್ದರೆ ತಿರಸ್ಕರಿಸಬಹುದು.

ಆದರೆ, ಈ ಪ್ರಕರಣದಲ್ಲಿ ಶಾಸಕರೇ ಖುದ್ದಾಗಿ ಸ್ಪೀಕರ್‌ ಕಚೇರಿಗೆ ತೆರಳಿ, ಅವರ (ಸ್ಪೀಕರ್‌) ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿ ಸ್ವೀಕೃತಿ ಪಡೆದಿದ್ದಾರೆ. ಸಾಲದೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

ಅದರರ್ಥ ಶಾಸಕರೇ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ, ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ಅವರು ನೇರವಾಗಿ ಅಂಗೀಕರಿಸಬೇಕಿತ್ತು ಎಂದು ಹೇಳಿದರು.

ಕಾಂಗ್ರೆಸ್‌ ದೂರು ಊರ್ಜಿತವಲ್ಲ:

ಪಕ್ಷ ವಿರೋಧಿ ಚಟುವಟಿಕೆಗಳಿಗೆ ಪಕ್ಷಾಂತರ ಕಾಯ್ದೆ ಅನ್ವಯ ಆಗುವುದಿಲ್ಲ. ಅಲ್ಲದೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ ತಕ್ಷಣವೇ ಶಾಸಕರ ಸ್ಥಾನದಿಂದ ಅನರ್ಹಗೊಳಿಸಬೇಕೆಂದೇನಿಲ್ಲ. ಪಕ್ಷಾಂತರ ಕಾಯ್ದೆ ಪ್ರಕಾರ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದೆಂದರೆ ಶಾಸಕ ಸ್ಥಾನವನ್ನು ಪ್ರತಿಬಂಧಿಸುವುದಾಗಿದೆ.

ಇಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವಾಗ ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಹಾಗೂ ಪ್ರತಿಬಂಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಕಾಂಗ್ರೆಸ್‌ ಮುಖಂಡರು ತಪ್ಪಾಗಿ ಅರ್ಥೈಸಿಕೊಂಡು ಶಾಸಕರನ್ನು ಅನರ್ಹಗೊಳಿಸಲು ಕೋರಿ ಸಲ್ಲಿಸಿರುವ ದೂರು ಉರ್ಜಿತವಾಗುವುದಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಪಕ್ಷಾಂತರ ಕಾಯ್ದೆ ಅನ್ವಯ ಆಗುವುದೇ ಇಲ್ಲ ಎಂದು ಹೇಳಿದರು.

ಅತೃಪ್ತ ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿರುವಾಗ, ಅದನ್ನು ಸ್ಪೀಕರ್‌ ಅವರು ಅಂಗೀಕರಿಸಬೇಕಿತ್ತು. ಆದರೆ, ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂಬ ಕಾರಣ ನೀಡಿ ಅಂಗೀಕಾರ ಪ್ರಕ್ರಿಯೆ ವಿಳಂಬ ಮಾಡುತ್ತಿರುವುದು ಕಾನೂನುಬದ್ಧವಾಗಿಲ್ಲ. ತನ್ಮೂಲಕ ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಅವರೇ ಕಾರಣವಾದಂತಾಗಿದೆ.

- ಬಿ.ವಿ.ಆಚಾರ್ಯ, ಮಾಜಿ ಅಡ್ವೋಕೇಟ್‌ ಜನರಲ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Photos: 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!
Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌