
ನವದೆಹಲಿ(ಏ. 30): ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಗಂಭೀರ ಚಿಂತನೆ ನಡೆದಿದೆ. ಚುನಾವಣಾ ವೆಚ್ಚಗಳಿಗೆ ಕಡಿವಾಣ ಹಾಕುವ ಸಲುವಾಗಿ ನೀತಿ ಆಯೋಗವು ಸಲಹೆ ನೀಡಿದೆ. ಎರಡು ಹಂತದಲ್ಲಿ ಈ ಚುನಾವಣೆಯನ್ನು ಮುಗಿಸುವುದು ಆಯೋಗದ ಶಿಫಾರಸಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಎಲ್ಲವೂ ಯೋಜಿತದಂತೆ ನಡೆದರೆ 2024ರಲ್ಲಿ ಇಂಥದ್ದೊಂದು ಪ್ರಯೋಗ ಆರಂಭಗೊಳ್ಳಲಿದೆ.
ನೀತಿ ಆಯೋಗವು ತನ್ನ ಈ ಸಲಹೆಯನ್ನು ಚುನಾವಣಾ ಆಯೋಗಕ್ಕೆ ನೀಡಿದೆ. 2024ರಷ್ಟರಲ್ಲಿ ಇದನ್ನು ಹೇಗೆ ಜಾರಿಗೊಳಿಸಬಹುದು ಎಂಬುದರ ಕಾರ್ಯಯೋಜನೆ ರೂಪಿಸುವಂತೆ ಆಯೋಗಕ್ಕೆ ಸೂಚಿಸಿದೆ. ಇನ್ನಾರು ತಿಂಗಳಲ್ಲಿ ಈ ಬಗ್ಗೆ ಒಂದು ವರದಿ ಪ್ರಸ್ತುತಗೊಳಿಸಬೇಕು. ಮುಂದಿನ ವರ್ಷದ ಮಾರ್ಚ್'ನಷ್ಟರಲ್ಲಿ ಅಂತಿಮ ನೀಲ ನಕ್ಷೆ ತಯಾರಿಸಬೇಕು. 2017ರಿಂದ 2020ರಲ್ಲಿ ಈ ಯೋಜನೆಯ ಜಾರಿಯ ನಿಟ್ಟಿನಲ್ಲಿ ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ 3 ವರ್ಷಗಳ ಕಾರ್ಯಯೋಜನೆಯ ಕರಡು ತಯಾರಿಸಬೇಕು ಎಂದು ನೀತಿ ಆಯೋಗ ತಿಳಿಸಿದೆ.
ಇದು ಹೇಗೆ ಸಾಧ್ಯ?
ಭಾರತದ ಬಹುತೇಕ ರಾಜ್ಯಗಳ ಚುನಾವಣಾ ದಿನಗಳು ಬೇರೆ ಬೇರೆ ದಿನಗಳಲ್ಲಿ ನಡೆಯುತ್ತವೆ. ಪ್ರತೀ ವರ್ಷವೂ ಒಂದಿಲ್ಲೊಂದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಚುನಾವಣಾ ವೆಚ್ಚ ಮತ್ತು ಸಿಬ್ಬಂದಿ ವೆಚ್ಚ ಸಾಕಷ್ಟು ಇರುತ್ತದೆ.
2024ಕ್ಕಿಂತ ಮುಂಚೆ ಮುಕ್ತಾಯಗೊಳ್ಳುವ ವಿಧಾನಸಭೆಗಳನ್ನು 2024ರವರೆಗೂ ಮುಂದುವರಿಸಬಹುದು. 2024ರ ನಂತರದವರೆಗೂ ಇರುವ ವಿಧಾನಸಭೆಗಳನ್ನು 2024ಕ್ಕೇ ಮೊಟಕುಗೊಳಿಸಬಹುದು. ಇದರಿಂದ ಭಾರತದ ಎಲ್ಲಾ ರಾಜ್ಯಗಳ ವಿಧಾನಸಭೆಗಳು ಏಕಕಾಲದಲ್ಲಿ ಅಂತ್ಯಗೊಳ್ಳುತ್ತವೆ. ಹೀಗಾಗಿ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೆಲ್ಲವನ್ನೂ ಏಕಕಾಲದಲ್ಲಿ ಮಾಡಲು ಸಾಧ್ಯವಾಗುತ್ತದೆ. ಇದು ನೀತಿ ಆಯೋಗ್'ನ ಚಿಂತನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.