
ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೊಳಗಾಗಿದ್ದ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು [ಎನ್ಐಎ], ಲವ್ ಜಿಹಾದ್ ಗೆ ಯಾವುದೇ ಪುರಾವೆಗಳಿಲ್ಲವೆಂದು ಹೇಳಿದೆ.
ಕೇರಳದಲ್ಲಿ ನಡೆದಿರುವ ಅಂತರ್ಧರ್ಮೀಯ ವಿವಾಹಗಳ ಕುರಿತು ತನಿಖೆ ನಡೆಸಿದ ಎನ್ಐಎಗೆ, ಬಲವಂತವಾಗಿ ಮದುವೆಯಾಗಿರುವ ಅಥವಾ ಷಡ್ಯಂತ್ರದ ಭಾಗವಾಗಿ ಮದುವೆಯಾಗಿರುವ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ.
ಈ ಪ್ರಕರಣವನ್ನು ಮುಚ್ಚಿರುವ ಎನ್ಐಎ, ಸುಪ್ರೀಂ ಕೋರ್ಟಿನಲ್ಲಿ ಇನ್ನಾವುದೇ ವರದಿ ಸಲ್ಲಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಆಂಗ್ಲ ದೈನಿಕ ಹಿಂದೂಸ್ತಾನ್ ಟೖಮ್ಸ್ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ತನಿಖಾ ಸಂಸ್ಥೆಯು, ದೂರು ದಾಖಲಾಗಿರುವ 89 ಪ್ರಕರಣಗಳ ಪೈಕಿ 11 ಸಂಶಯಾಸ್ಪದ ವಿವಾಹಗಳ ತನಿಖೆಯನ್ನು ನಡೆಸಿದೆ.
ಕಳೆದ ವರ್ಷ ಕೇರಳದಲ್ಲಿ ನಡೆದ ಮುಸ್ಲಿಂ ಯುವಕ- ಹಿಂದೂ ಯುವತಿ ಮದುವೆ ಪ್ರಕರಣವು ಲವ್ ಜಿಹಾದ್ ರೂಪ ಪಡೆದುಕೊಂಡಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಏನಿದು ಪ್ರಕರಣ:
ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಹಿಂದೂ ಹುಡುಗಿ ಹಾದಿಯಾ , ಶಫೀನ್ ಜಹಾನ್ ಎಂಬಾತನ್ನು ಪ್ರೀತಿಸಿ, ಇಸ್ಲಾಮ್'ಗೆ ಮತಾಂತರಗೊಂಡು ಮದುವೆಯಾಗಿದ್ದಳು. ಹಾದಿಯಾಳ ಪೋಷಕರು ಇದೊಂದು ಲವ್ ಜಿಹಾದ್ ಕೇಸ್ ಎಂದು ಆರೋಪಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಕೋರ್ಟ್ ಹಾದಿಯಾಳ ವಿವಾಹವನ್ನು ಅಮಾನ್ಯಗೊಳಿಸಿ ಆಕೆಯ ಪೋಷಕರ ಸುಪರ್ದಿಗೆ ಒಪ್ಪಿಸಿತ್ತು.
ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಾದಿಯಾ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾ.ಎ.ಎಂ ಖಾನ್ವಿಲ್ಕರ್ ಹಾಗೂ ನ್ಯಾ. ಡಿ.ವೈ. ಚಂದ್ರಚೂಡ್ ನ್ಯಾಯಪೀಠವು ಮದುವೆಯನ್ನು ಊರ್ಜಿತಗೊಳಿಸಿತ್ತು. ಈ ನಡುವೆ ಎನ್ಐಎ ಕೂಡಾ ಲವ್ ಜಿಹಾದ್ ಕುರಿತು ತನಿಖೆ ನಡೆಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.