
ಬೆಂಗಳೂರು: ಕಳೆದ ವರ್ಷದ ಕಹಿ ನೆನಪಿನ ಆತಂಕದ ನಡುವೆಯೂ ಜನರಲ್ಲಿ ಉತ್ಸಾಹವೇನೂ ಕಡಿಮೆಯಾಗಿರಲಿಲ್ಲ. ತಮ್ಮೆಲ್ಲ ಆತಂಕಗಳನ್ನು ಬದಿಗೊತ್ತಿ ನಗರದ ಜನ ಸಡಗರದಿಂದಲೇ ಹೊಸ ವರ್ಷವನ್ನು ಸ್ವಾಗತಿಸಿದರು. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ನಗರದ ಬಹುತೇಕ ಕ್ಲಬ್ಗಳು, ರೆಸಾರ್ಟ್, ಪಬ್ಗಳು ಮತ್ತು ಬ್ರಿಗೇಡ್ ರಸ್ತೆ ಮದುವೆ ಮನೆಯನ್ನು ನೆನಪಿಸುವಂತಿತ್ತು.
ಭಾನುವಾರ ತಡರಾತ್ರಿಯಲ್ಲಿ ಗಡಿಯಾರದ ಮುಳ್ಳು 12 ಗಂಟೆ ತೋರಿಸಿತ್ತು. 1.1.2018 ಎಂದು ವಿದ್ಯುತ್ ದೀಪಗಳೆಲ್ಲ ಕಣ್ಮುಚ್ಚಿ ಮತ್ತೆ ಕಣ್ತೆರೆದು ಬೆಳಕು ಚೆಲ್ಲುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತು. ಎಲ್ಲರಿಂದ ಒಂದೇ ಉದ್ಘಾರ ‘ಹ್ಯಾಪಿ ನ್ಯೂ ಇಯರ್’. ಕ್ರಿಸ್ಮಸ್ ಸಡಗರ ಮುಗಿಯುತ್ತಿದ್ದಂತೆ ಹೊಸ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದ ಎಲ್ಲರಲ್ಲಿ ಎಲ್ಲಿಲ್ಲದ ಉತ್ಸಾಹ.
ಒಂದೆಡೆ ಒಬ್ಬರಿಗೊಬ್ಬರು ಹಸ್ತ ಲಾಘವ ಮಾಡಿ, ಆಲಂಗಿಸಿ ಹೊಸ ವರ್ಷದ ಆಗಮನಕ್ಕೆ ಶುಭಾಶಯ ಕೋರುತ್ತಿದ್ದರೆ, ಮತ್ತೊಂದೆಡೆ ಪಟಾಕಿ ಸಿಡಿತ, ಬಾಣ-ಬಿರುಸಿನ ಚಿತ್ತಾರ ಕಣ್ಮನ ಸೆಳೆಯಿತು. ಡಿಸೆಂಬರ್ನ ಮಾಗಿ ಚಳಿಯ ನಡುವೆಯೂ ಬಗೆಬಗೆಯ ಪಾನೀಯಗಳ ಅಮಲು, ತರತರಹದ ಸಂಗೀತಗಳ ಅಬ್ಬರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ರೆಸಾರ್ಟ್, ಕ್ಲಬ್ಗಳಲ್ಲಿ ಡಿಜೆ ಮ್ಯೂಸಿಕ್ ಮತ್ತೇರಿಸುವಂತಿದ್ದು, ಯುವ ಸಮೂಹ ಕುಣಿದು ಕುಪ್ಪಳಿಸಿ, ಕೇಕೆ ಹಾಕಿ ಸಂಭ್ರಮಿಸಿದರು.
2018ರ ಡಿ.31ರ ರಾತ್ರಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ಆತಂಕದ ನಡುವೆಯೂ ಜನರಲ್ಲಿ ಉತ್ಸಾಹ ಕಡಿಮೆಯಾಗಿರಲಿಲ್ಲ. ಸಂಜೆ ೬ಗಂಟೆಯಿಂದಲೇ ಬ್ರಿಗೇಡ್ ರಸ್ತೆ ವಿದ್ಯುತ್ ದೀಪಗಳಿಂದ ಜಗಮಗಿಸತೊಡಗಿತ್ತು.
ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆಗಳಲ್ಲಿ ಭಾರೀ ಜನಸ್ತೋಮ ಕಂಡು ಬಂತು. ತಡರಾತ್ರಿ 12 ಸಮೀಪಿಸುವ ಹೊತ್ತಿಗೆ ನಗರದೆಲ್ಲೆಡೆಯಿಂದ ಗುಂಪು ಗುಂಪಾಗಿ ಯುವಕರು, ಯುವತಿಯರು ಬಂದು ಸೇರತೊಡಗಿದ್ದರು. ಬಣ್ಣಬಣ್ಣದ ಉಡುಗೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರತಿಬಿಂಬಗಳಂತೆ ಕಂಗೊಳಿಸುತ್ತಿದ್ದ ಅವರಲ್ಲಿ ಸಂಭ್ರಮ ಮನೆಮಾಡಿತ್ತು. ಕೆಲವರು ಕುಟುಂಬ ಸಮೇತರಾಗಿ ಹೊಸವರ್ಷಾಚರಣೆಗೆಂದೇ ಬ್ರಿಗೇಡ್ ರಸ್ತೆಗೆ ಬಂದು ಗಮನ ಸೆಳೆದರು.
ತುಮಕೂರು ರಸ್ತೆ, ಜಯನಗರ, ಯಶವಂತಪುರ, ಗಾಂಧಿನಗರ, ಮೈಸೂರು ರಸ್ತೆ, ವೈಟ್ಫೀಲ್ಡ್, ಮಡಿವಾಳ, ಕೋರಮಂಗಲ, ಹಳೆ ಮದ್ರಾಸ್ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆಗಳಲ್ಲಿ ಸಂಭ್ರಮದ ವಾತಾವರಣ ಕಂಡುಬಂತು. ಈ ಭಾಗದ ಕ್ಲಬ್ಗಳು, ಪಬ್ಗಳಲ್ಲಿ ದೀಪಾಲಂಕಾರವಿತ್ತು. ವಾದ್ಯಗೋಷ್ಠಿಗಳು, ಸಂಗೀತ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಂಭ್ರಮಾಚರಣೆ, ಪ್ರಾರ್ಥನೆ: ಕ್ರಿಸ್ಮಸ್ನಂತೆ ಹೊಸವರ್ಷವೂ ಕ್ರೈಸ್ತರಿಗೆ ಹಬ್ಬ. ಈ ಹಿನ್ನೆಲೆಯಲ್ಲಿ ಹೊಸವರ್ಷಕ್ಕೆ ಸ್ವಾಗತ ಕೋರಲು ಭಾನುವಾರ ರಾತ್ರಿ 9 ಗಂಟೆಯಿಂದಲೇ ಚರ್ಚ್ಗಳಲ್ಲಿ ಪ್ರಾರ್ಥನೆಯಲ್ಲಿ ನಡೆಯಿತು.
‘ಗಾಂಧಿ ರಸ್ತೆ’ಯಲ್ಲಿ ಪ್ರತಿಭಟನೆ: ಮಹಾತ್ಮಗಾಂಧೀಜಿಯವರ ಹೆಸರಿನ ರಸ್ತೆಯಲ್ಲಿ ಮದ್ಯ ಸೇವಿಸಿ ಅನಾಗರೀಕವಾಗಿ ವರ್ತಿಸುವಂತಹದ್ದು ಸರಿಯಲ್ಲ. ನಗರದ ಬೇರೆ ಕಡೆಗಳಲ್ಲಿ ಹೊಸ ವರ್ಷಾಚರಣೆ ಮಾಡಿಕೊಳ್ಳುವಂತೆ ಆಗ್ರಹಿಸಿ ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು ಎಂ.ಜಿ.ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.