ಪೊಲೀಸರಿಗೆ ತಲೆನೋವು ತಂದ ನಕಲಿ ಹೆಲ್ಮೆಟ್ ಪತ್ತೆ ವಿಚಾರ

By Suvarna Web DeskFirst Published Jan 11, 2018, 10:25 AM IST
Highlights

ಕಳಪೆ ಹೆಲ್ಮೆಟ್ ನಿಷೇಧ ವಿಚಾರವು ಸಾರ್ವಜನಿಕ ವಲಯದಲ್ಲಿ ಕಾವೇರುತ್ತಿರುವ ಬೆನ್ನಲ್ಲೇ ಈಗ ಸಂಚಾರ ವಿಭಾಗದ ಪೊಲೀಸರಿಗೆ ‘ನಕಲಿ’ ಪತ್ತೆ ಹಚ್ಚೋದು ಹೇಗೆಂಬುದು ತಲೆ ಬಿಸಿ ತಂದಿದೆ. ಹೌದು. ಜನವರಿ ತಿಂಗಳ ನಂತರ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಐಎಸ್‌ಐ ಪ್ರಮಾಣೀಕೃತವಲ್ಲದ ಹೆಲ್ಮೆಟ್‌ಗಳ ಬಳಕೆಗೆ ಅವಕಾಶವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು (ಜ.11): ಕಳಪೆ ಹೆಲ್ಮೆಟ್ ನಿಷೇಧ ವಿಚಾರವು ಸಾರ್ವಜನಿಕ ವಲಯದಲ್ಲಿ ಕಾವೇರುತ್ತಿರುವ ಬೆನ್ನಲ್ಲೇ ಈಗ ಸಂಚಾರ ವಿಭಾಗದ ಪೊಲೀಸರಿಗೆ ‘ನಕಲಿ’ ಪತ್ತೆ ಹಚ್ಚೋದು ಹೇಗೆಂಬುದು ತಲೆ ಬಿಸಿ ತಂದಿದೆ. ಹೌದು. ಜನವರಿ ತಿಂಗಳ ನಂತರ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಐಎಸ್‌ಐ ಪ್ರಮಾಣೀಕೃತವಲ್ಲದ ಹೆಲ್ಮೆಟ್‌ಗಳ ಬಳಕೆಗೆ ಅವಕಾಶವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಈ ಗಡುವು ಮುಗಿದ ಬಳಿಕ ಗುಣಮಟ್ಟವಲ್ಲದ, ಐಎಸ್‌ಐ ಗುರುತಿಲ್ಲದ ಹೆಲ್ಮೆಟ್ ಧರಿಸುವ ದ್ವಿಚಕ್ರ ವಾಹನಗಳ ಸವಾರರ ವಿರುದ್ಧ ಹೇಗೆ ಪೊಲೀಸರ ಕ್ರಮ ಎಂಬುದು ಪ್ರಶ್ನೆಯಾಗಿದೆ. ಪಾನಮತ್ತ ಚಾಲಕರ ಪತ್ತೆಗೆ ಅಲ್ಕೋಮೀಟರ್ ಬಳಸುವ ಪೊಲೀಸರು, ನಕಲಿ ಹೆಲ್ಮೆಟ್‌ಗಳ ಪತ್ತೆಗೆ ಸಾಧನ ಬಳಸುತ್ತಾರೆಯೇ ಎಂಬ ಮಾತುಗಳು ಕೇಳಿ ಬಂದಿವೆ.

ಆದರೆ ಇದುವರೆಗೆ ಹೆಲ್ಮೆಟ್‌ಗಳ ವಿರುದ್ಧದ ಕಾರ್ಯಾಚರಣೆ ಕುರಿತು ಸ್ಪಷ್ಟ ನಿಲುವಿಗೆ ಬಾರದ ಅಧಿಕಾರಿಗಳು, ಫೆಬ್ರವರಿ ಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಸಂಬಂಧ ಕೆಳಹಂತ ಅಧಿಕಾರಿಗಳ ಜತೆ ಚರ್ಚಿಸಿರುವ ಹಿರಿಯ ಅಧಿಕಾರಿಗಳು, ಮೊದಲು ಹೆಲ್ಮೆಟ್ ಧಾರಣೆ ಕುರಿತು ಅರಿವು ಮೂಡಿಸೋಣ. ಆನಂತರ ದಂಡ ವಿಧಿಸುವ ಬಗ್ಗೆ ತೀರ್ಮಾನಿಸಿದ್ದಾರಾಯ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಏನಿದು ನಿಯಮ?: ಇಂಡಿಯನ್ ಬ್ಯುರೋ ಆಫ್ ಸ್ಟ್ಯಾಂಡರ್ಡ್ (ಐಎಸ್‌ಐ) ಪ್ರಕಾರ, ಐಎಸ್ 4151:1993 ಮುದ್ರೆ ಹೊಂದಿರುವ ಹೆಲ್ಮೆಟ್‌ಗಳನ್ನು ಮಾತ್ರ ಧರಿಸಬೇಕು ಎಂದು ನಿಮಯವಿದೆ. ಅಲ್ಲದೆ ಮೋಟಾರು ವಾಹನ ಕಾಯ್ದೆಯು ರಕ್ಷಣಾತ್ಮಕ ಹೆಲ್ಮೆಟ್ ಧರಿಸುವಂತೆ ಸ್ಪಷ್ಟವಾಗಿ ಹೇಳುತ್ತದೆ. ಐಎಸ್‌ಐ ಮುದ್ರೆ ಹೊಂದಿರುವ ಹೆಲ್ಮೆಟ್‌ಗಳ ಮೇಲೆ ತಯಾರಿಕಾ ಕಂಪನಿ ಹೆಸರು, ದಿನಾಂಕ ಹಾಗೂ ಗಾತ್ರದ ವಿವರಗಳು ನಮೂದಾಗಿರುತ್ತವೆ. ಆದರೆ ಕಳಪೆ ಹೆಲ್ಮೆಟ್‌ಗಳಲ್ಲಿ ಇದ್ಯಾವ ಅಂಶಗಳಿರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಇತ್ತೀಚಿಗೆ ಮೈಸೂರು ನಗರದಲ್ಲಿ ಕಳಪೆ ಹೆಲ್ಮಟ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದು ರಾಜ್ಯದಲ್ಲಿ ಕಳಪೆ ಹೆಲ್ಮಟ್ ನಿಷೇಧ ವಿಚಾರ ಹುಟ್ಟಿಗೆ ಕಾರಣವಾಯಿತು. ಅಲ್ಲದೆ, ಹೈ ಕೋರ್ಟ್ ಸಹ, ಐಎಸ್‌ಐ ಪ್ರಮಾಣೀಕೃವಲ್ಲದ ಹೆಲ್ಮೆಟ್ ಧರಿಸುವ ವ್ಯಕ್ತಿ ಅಪಘಾತ ಕ್ಕೀಡಾದರೆ ಆತ ವಿಮಾ ಹಣಕ್ಕೆ ಅರ್ಹನಲ್ಲ ಎಂದು ಮಹತ್ವದ ಆದೇಶಿಸಿದೆ. ಹೀಗಾಗಿ ಕಳಪೆ ಹೆಲ್ಮೆಟ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

ಸ್ಟಿಕರ್ ಬಳಸಿದರೆ ಕ್ರಮ: ಇತ್ತೀಚಿಗೆ ಕಳಪೆ ಹೆಲ್ಮೆಟ್‌ಗಳ ವಿರುದ್ಧ ಗದಾ ಪ್ರಹಾರ ನಡೆಸಿ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದ್ದ ಮೈಸೂರು ನಗರ ಪೊಲೀಸರು, ಫೆಬ್ರವರಿ ನಂತರ ಎರಡನೇ ಹಂತದ ಕಾರ್ಯಾಚರಣೆಗೆ ತಯಾರಿ ನಡೆಸಿದ್ದಾರೆ. ಈ ಬಗ್ಗೆ ಬುಧವಾರ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಮೈಸೂರು ನಗರ ಆಯುಕ್ತ ಸುಬ್ರಹ್ಮಣೇಶ್ವರ ರಾವ್ ಅವರು, ದ್ವಿಚಕ್ರ ವಾಹನ ಸವಾರರು ತಾವು ಧರಿಸುವ ಹೆಲ್ಮೆಟ್‌ಗಳಲ್ಲಿ ಐಎಸ್‌ಐ ಚಿನ್ಹೆ ಸ್ಪಷ್ಟವಾಗಿರಬೇಕು. ಆ ಹೆಲ್ಮೆಟ್‌ಗಳಲ್ಲಿ ಸ್ಟಿಕರ್ ಬಳಸಿ ಐಎಎಸ್ ಚಿನ್ಹೆ ಹಾಕಿದ್ದರೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

click me!