ವಿದೇಶಕ್ಕೆ ಹೊರಟಿದ್ದ ಎನ್‌ಡಿಟಿವಿ ಮಾಲೀಕ ಪ್ರಣಯ್‌ ರಾಯ್‌ ದಂಪತಿಗೆ ತಡೆ!

By Web DeskFirst Published Aug 10, 2019, 7:55 AM IST
Highlights

ವಿದೇಶಕ್ಕೆ ಹಾರುತ್ತಿದ್ದ ಎನ್‌ಡಿಟೀವಿ ಮಾಲೀಕ ಪ್ರಣಯ್‌ ರಾಯ್‌ ವಶಕ್ಕೆ| ವಿದೇಶಕ್ಕೆ ಹೋಗಿ ಆ.16ರಿಂದ ವಾಪಸ್‌ ಬರುವ ಉದ್ದೇಶವಿತ್ತು| ನಕಲಿ ಭ್ರಷ್ಟಾಚಾರ ಪ್ರಕರಣ ಮುಂದಿಟ್ಟುಕೊಂಡು ಇಬ್ಬರನ್ನೂ ಸಿಬಿಐ ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ

ನವದೆಹಲಿ[ಆ.10]: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಎನ್‌ಡಿಟೀವಿ ವಾಹಿನಿಯ ಸಂಸ್ಥಾಪಕರಾದ ಪ್ರಣಯ್‌ ರಾಯ್‌ ಹಾಗೂ ಅವರ ಪತ್ನಿ ರಾಧಿಕಾ ರಾಯ್‌ ಅವರು ಶುಕ್ರವಾರ ವಿದೇಶ ಪ್ರಯಾಣ ಕೈಗೊಳ್ಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ ಅಧಿಕಾರಿಗಳು ಅವರನ್ನು ತಡೆದು ವಶಕ್ಕೆ ಪಡೆದ ಘಟನೆ ಶುಕ್ರವಾರ ಸಂಜೆ ನಡೆದಿದೆ. ವಿದೇಶಕ್ಕೆ ಹೋಗಿ ಆ.16ರಿಂದ ವಾಪಸ್‌ ಬರುವ ಉದ್ದೇಶವಿತ್ತು. ಆದರೆ ನಕಲಿ ಭ್ರಷ್ಟಾಚಾರ ಪ್ರಕರಣ ಮುಂದಿಟ್ಟುಕೊಂಡು ಇಬ್ಬರನ್ನೂ ಸಿಬಿಐ ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ ಎನ್‌ಡಿಟೀವಿ ಹೇಳಿಕೆ ಬಿಡುಗಡೆ ಮಾಡಿದೆ. ಜೆಟ್‌ ಏರ್‌ವೇಸ್‌ ಕಂಪನಿ ಮಾಲೀಕ ನರೇಶ್‌ ಗೋಯಲ್‌ ಅವರನ್ನು ಇತ್ತೀಚೆಗಷ್ಟೇ ಇದೇ ರೀತಿ ತಡೆದು ವಾಪಸ್‌ ಕಳುಹಿಸಲಾಗಿತ್ತು.

ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆದ ಘಟನೆ ಮುಂಬೈನಲ್ಲಿ ನಡೆದಿದೆ. ಕೇಂದ್ರೀಯ ತನಿಖಾ ತಂಡ(ಸಿಬಿಐ) ನಿರ್ದೇಶನದ ಮೇರೆಗೆ ವಿದೇಶಕ್ಕೆ ತೆರಳುತ್ತಿದ್ದ ಪ್ರಣಯ್‌ ಹಾಗೂ ಅವರ ಪತ್ನಿ ರಾಧಿಕಾರನ್ನು ವಿಮಾನ ಹತ್ತಲು ವಿಮಾನ ನಿಲ್ದಾಣ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಇಬ್ಬರು ನಾಯಕರು ಎದುರಿಸುತ್ತಿರುವ ಅಕ್ರಮ ಹಣ ಅವ್ಯವಹಾರ ಘಟನೆಯನ್ನು ಸಿಬಿಐ ತನಿಖೆ ನಡೆಸುತ್ತಿದೆ. ಆದರೆ, ಈ ಘಟನೆಯನ್ನು ‘ಮಾಧ್ಯಮ ಸ್ವಾತಂತ್ರ್ಯದ ನಾಶ’ ಎಂದು ಎನ್‌ಡಿಟೀವಿ ಆರೋಪಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿದ ಎನ್‌ಡಿಟೀವಿ, ‘ತಮ್ಮ ವಿರುದ್ಧದ ಆರೋಪಗಳ ತನಿಖೆಗೆ ಪ್ರಣಯ್‌ ಹಾಗೂ ರಾಧಿಕಾರ ಸಹಕರಿಸುತ್ತಿದ್ದಾರೆ. ಈ ಇಬ್ಬರು ಪತ್ರಕರ್ತರ ಬಳಿ ಒಂದು ವಾರದ ಬಳಿಕ ಪುನಃ ಭಾರತಕ್ಕೆ ವಾಪಸ್ಸಾಗುವ ವಿಮಾನದ ಟಿಕೆಟ್‌ಗಳಿದ್ದವು. ಆದಾಗ್ಯೂ, 2 ವರ್ಷಗಳ ಹಿಂದೆ ಸಿಬಿಐ ದಾಖಲಿಸಿಕೊಂಡಿರುವ ಸುಳ್ಳು ಹಾಗೂ ಯಾವುದೇ ಸಾಕ್ಷ್ಯಾಧಾರವಿಲ್ಲದ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಬೇಕಿದ್ದವರನ್ನು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿದೆ. ಈ ಹಿಂದೆ ಮಾಧ್ಯಮ ಮಾಲೀಕರ ಮೇಲಿನ ದಾಳಿಗಳು ಹಾಗೂ ಇಂದಿನ ಕ್ರಮವು ತಮ್ಮನ್ನು ಪಾಲಿಸಿ, ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ಧರಾಗಿರುವಂತೆ ಸರ್ಕಾರ ಎಚ್ಚರಿಕೆ ನೀಡಿರುವಂತಿದೆ’ ಎಂದು ದೂರಿದೆ.

ಕೆಲವು ತಿಂಗಳ ಹಿಂದಷ್ಟೇ, ತಮ್ಮ ಪತ್ನಿ ಜೊತೆ ವಿದೇಶಕ್ಕೆ ತೆರಳುತ್ತಿದ್ದ ತೀವ್ರ ನಷ್ಟಕ್ಕೆ ತುತ್ತಾಗಿ ಇದೀಗ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ ನರೇಶ್‌ ಗೋಯೆಲ್‌ ಅವರನ್ನು ಸಹ ಇದೇ ರೀತಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು.

click me!