
ಲಾಹೋರ್: 160 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ 2008 ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಕೈವಾಡ ಇರುವುದನ್ನು ಇದೇ ಮೊದಲ ಬಾರಿಗೆ ಪಾಕಿಸ್ತಾನ ಬಹಿರಂಗವಾಗಿಯೇ ಒಪ್ಪಿಕೊಂಡಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರೀ ಮುಖಭಂಗ ಉಂಟು ಮಾಡಿದೆ.
ಪಾಕಿಸ್ತಾನದ ‘ಡಾನ್’ ಪತ್ರಿಕೆಗೆ ಸಂದರ್ಶನ ನೀಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್, ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಸಕ್ರಿಯವಾಗಿರುವುದನ್ನು ಒಪ್ಪಿಕೊಳ್ಳುವುದರ ಜೊತೆಗೆ ಇಂಥ ದೇಶಾತೀತ ಉಗ್ರರಿಗೆ ಗಡಿದಾಟಲು ಅವಕಾಶ
ನೀಡಿ, ಮುಂಬೈ ದಾಳಿಯಂಥ ಘಟನೆ ನಡೆಯುವುದಕ್ಕೆ ಸರ್ಕಾರದ ನೀತಿಗಳು ಅನುವು ಮಾಡಿಕೊಟ್ಟಿರುವುದನ್ನು ಪ್ರಶ್ನಿಸಿದ್ದಾರೆ.
‘ಉಗ್ರವಾದ ಕುರಿತ ಆಫ್ಘಾನಿಸ್ತಾನದ ನಿಲುವುಗಳನ್ನು ಒಪ್ಪಲಾಗುತ್ತಿದೆ. ಈ ವಿಷಯದಲ್ಲಿ ನಾವು ಸಾಕಷ್ಟು ಬಲಿದಾನ ಮಾಡಿದರೂ, ನಮ್ಮ ನಿಲುವುಗಳನ್ನು ಯಾರೂ ಬೆಂಬಲಿಸುತ್ತಿಲ್ಲ, ನಮ್ಮನ್ನೇ ನಾವು ಪ್ರತ್ಯೇಕಿಸಿಗೊಂಡಿದ್ದೇವೆ. ಈ ಬಗ್ಗೆ ನಾವು ಗಮನ ಹರಿಸಬೇಕಿದೆ. ಹಲವು ಉಗ್ರ ಸಂಘಟನೆಗಳು ಈಗಲೂ ದೇಶದಲ್ಲಿ ಸಕ್ರಿಯವಾಗಿವೆ.
ಅವರನ್ನು ದೇಶಾತೀತ ಉಗ್ರರೆಂದೇ ಕರೆಯಿರಿ. ಆದರೆ ಅವರನ್ನು ನಾವು ಗಡಿ ದಾಟಿ ಮುಂಬೈನಲ್ಲಿ 150 ಜನರನ್ನು ಹತ್ಯೆ ಮಾಡಲು ಬಿಡಬೇಕೇ? ನಾವೇಕೇ ಆ ಪ್ರಕರಣದ ವಿಚಾರಣೆಯನ್ನು ಶೀಘ್ರ ಮುಗಿಸಬಾರದು. ಇಂಥ ವಿಷಯಗಳನ್ನು ನಾವು ಒಪ್ಪುವುದಿಲ್ಲ ಎಂದು
ಪುಟಿನ್, ಕ್ಸಿ ಜಿನ್ಪಿಂಗ್, ಡೊನಾಲ್ಡ್ ಟ್ರಂಪ್ ಖಂಡತುಂಡವಾಗಿ ಹೇಳಿದ್ದಾರೆ’ ಎಂದು ಪಾಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.