
ನವದೆಹಲಿ: ಕೇಂದ್ರ ಸರ್ಕಾರವು ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟಿದೆ ಎಂಬ ಪ್ರತಿಪಕ್ಷಗಳ ಆರೋಪಗಳಿಂದ ವಿಚಲಿತರಾದಂತೆ ಕಂಡುಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಪ್ರತಿ ಬಿಜೆಪಿ ಸಂಸದರು 2 ರಾತ್ರಿಗಳನ್ನು ದಲಿತರ ಹಾಡಿಗಳಲ್ಲಿ ಕಳೆದು, ಈ ಮಿಥ್ಯೆಯನ್ನು ಹೋಗಲಾಡಿಸಬೇಕು’ ಎಂದು ಕರೆ ನೀಡಿದ್ದಾರೆ.
ಪಕ್ಷದ 38ನೇ ಸಂಸ್ಥಾಪನಾ ದಿವಸದಲ್ಲಿ ಮಾತನಾಡಿದ ಮೋದಿ ಈ ವಿಷಯ ತಿಳಿಸಿದರು ಎಂದು ಸಭೆಯಲ್ಲಿದ್ದ ಕೆಲವು ಬಿಜೆಪಿ ಸಂಸದರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಶೇ.50ಕ್ಕಿಂತ ಹೆಚ್ಚು ದಲಿತರು ಇರುವ ಗ್ರಾಮಗಳಿಗೆ ಅಂಬೇಡ್ಕರ್ ಜಯಂತಿ ದಿನವಾದ ಏಪ್ರಿಲ್ 14 ಹಾಗೂ ಮೇ 5ರ ಮಧ್ಯೆ ತೆರಳಿ. ಅಲ್ಲಿ 2 ರಾತ್ರಿಗಳನ್ನು ದಲಿತರೊಂದಿಗೆ ಸಂವಾದ ನಡೆಸುತ್ತ ಕಳೆಯಿರಿ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ದಲಿತ ನೀತಿಗೆ ಸಂಬಂಧಿಸಿದಂತೆ ಹರಡಿಸುತ್ತಿರುವ ಮಿಥ್ಯೆಗಳ ಬಗ್ಗೆ ತಿಳಿಹೇಳಿ. ಅಲ್ಲದೆ, ಪಕ್ಷವು ಹಮ್ಮಿಕೊಂಡಿರುವ ದಲಿತ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ’ ಎಂದು ಮೋದಿ ಕರೆ ನೀಡಿದರು.
ದೇಶದಲ್ಲಿ ದಲಿತರ ಹೆಚ್ಚಾಗಿರುವ ಹಳ್ಳಿಗಳ ಸಂಖ್ಯೆ 20000ಕ್ಕಿಂತ ಹೆಚ್ಚಿದೆ. ಇಂಥ ಹಳ್ಳಿಗಳನ್ನು ಆಯ್ಕೆ ಮಾಡಿ ಅಲ್ಲಿ ವಾಸ್ತವ್ಯ ಮಾಡಬೇಕು. ನಮ್ಮ ಬಗ್ಗೆ ವಿಪಕ್ಷಗಳು ಹಬ್ಬಿಸುತ್ತಿರುವ ಸುದ್ದಿ ಸುಳ್ಳು ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕು. ಏ.14ರಂದು ನಡೆಯುವ ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಬಿಜೆಪಿ ಸಂಸದರು ತಮ್ಮ ಸ್ವಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸಬೇಕು ಎಂದು ಮೋದಿ ಸೂಚಿಸಿದರು ಎನ್ನಲಾಗಿದೆ.
ಈ ನಡುವೆ, ಅಂಬೇಡ್ಕರ್ ಜಯಂತಿಯ ಮುನ್ನಾ ದಿನವಾದ ಏಪ್ರಿಲ್ 13ರಂದು ಮೋದಿ ಅವರು, ಅಂಬೇಡ್ಕರ್ ನಿಧನ ಹೊಂದಿದ ‘26, ಅಲಿಪುರ ಮಾರ್ಗ’ದ ನಿವಾಸವನ್ನು ಸ್ಮಾರಕ ಎಂದು ಘೋಷಿಸಿ ಉದ್ಘಾಟಿಸುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.