ಬೆಂಗಳೂರು(ಸೆ.27): ಉದ್ಯಾನನಗರಿಯ ಜನರಿಗೆ ಹತ್ತಿರವಾಗುತ್ತಿದ್ದ ನಮ್ಮ ಮೆಟ್ರೋಗೆ ಇದೀಗ ಸಂಕಷ್ಟ ಎದುರಾಗಿದೆ. 2017ರ ವೇಳೆಗೆ ಇನ್ನಷ್ಟು ಹೊಸ ಮಾರ್ಗಗಲ್ಲಿ ಸಂಚಾರಿಸುವ ಉದ್ದೇಶ ಹೊಂದಿದ್ದ ಮೆಟ್ರೋ ಹೊಸ ಮಾರ್ಗಕ್ಕೆ ವಿರೋಧ ವ್ಯಕ್ತವಾಗಿದೆ. ಮೆಟ್ರೋ ಮಾರ್ಗದ ವಿನ್ಯಾಸದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದೆ.
ಮೆಟ್ರೋ 2ನೇ ಹಂತದ ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಜಯನಗರದ ಲಕ್ಷ್ಮಣರಾವ್ ಪಾರ್ಕ್ ಇದೆ. ಈ ಕಾಮಗಾರಿಯಿಂದ ಸುಮಾರು 350ಕ್ಕೂ ಹೆಚ್ಚು ಮರಗಳು ನಾಶವಾಗುತ್ತವೆ ಎನ್ನುವ ಭಯ ಜನರಿಗೆ ಕಾಡುತ್ತಿದೆ. ಜಯನಗರದ ಸಮನ್ವಯ ವೇದಿಕೆ, ಪಾರ್ಕ್ ಉಳಿಸುವ ನಿಟ್ಟಿನಲ್ಲಿ ಬಿಎಂಆರ್ಸಿಎಲ್'ಗೆ ಪತ್ರ ಬರೆದು ನಕ್ಷೆ ಬದಲಿಸುವಂತೆ ಕೋರಿತ್ತು. ಆದರೆ, ಇದಕ್ಕೆ BMRCL ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜಯನಗರ ಸಮನ್ವಯ ವೇದಿಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದೆ.
ಇನ್ನು ಮಾರ್ಗದ ವಿನ್ಯಾಸದ ಕುರಿತು ಮುಂದಿನ ತಿಂಗಳು ಅಕ್ಟೋಬರ್ 4ರಂದು ವಿಚಾರಣೆ ನಡೆಯಲಿದೆ. ಒಟ್ಟಿನಲ್ಲಿ 2017ರಲ್ಲಿ ಪ್ರಾರಂಭ ಆಗಬೇಕಿದ್ದ 2 ಹಂತದ ಮೆಟ್ರೋ ಮಾರ್ಗ ಕಾಮಗಾರಿ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಆಗುತ್ತದೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕು.