
ಬೆಂಗಳೂರು : ಫೆ.17ರ ರಾತ್ರಿ ಫರ್ಜಿ ಕೆಫೆಯಲ್ಲಿ ನಡೆದ ಎಂಎಲ್ಎ ಹ್ಯಾರಿಸ್ ಪುತ್ರನ ಪುಂಡಾಟ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಘಟನೆ ಬಳಿಕ ನಲಪ್ಪಾಡ್ ಪರಪ್ಪನ ಅಗ್ರಹಾರದಲ್ಲೇ ಮುದ್ದೆ ಮುರಿಯುತ್ತಿದ್ದಾನೆ. ಇದೀಗ ಪುಂಡಾಟದ ಕೃತ್ಯ ಹೇಗೆಂದು ನಲಪಾಡ್ ಬಾಯ್ಬಿಟ್ಟಿದ್ದಾನೆ. ವಿದ್ವತ್ ಜತೆ ಜಗಳ ಮತ್ತು ಹಲ್ಲೆಗೆ ಏನು ಕಾರಣ ಎಂದು ನಲಪಾಡ್ ಎಳೆ ಎಳೆಯಾಗಿ ಹೇಳಿದ್ದಾನೆ.
ದಿನಾಂಕ 17.02.18 ರಂದು ನಾನು ನನ್ನ ಕಾರು ಚಾಲಕನಾದ ಅರುಣ್ ಮತ್ತು ನನ್ನ ಸಹಚರರಾದ ಮಂಜುನಾಥ್, ಬಾಲಕೃಷ್ಣ ಮೊಹಮದ್ ಅಪ್ರಾಸ್, ಅಭಿಷೇಕ್ ಹಾಗೂ ನಫಿ ರವರ ಜೊತೆಯಲ್ಲಿ ಯುಬಿ ಸಿಟಿಯಲ್ಲಿರುವ ಫೆರ್ಜಿ ಕೆಫೆಗೆ ಊಟಕ್ಕೆಂದು ಹೋಗಿದ್ದಾಗ ಯಾರೋ ಅಪರಿಚಿತ ಸುಮಾರು 23-24 ವರ್ಷದ ಹುಡುಗ ತನ್ನ ಸ್ನೇಹಿತರೊಂದಿಗೆ ನಿಂತುಕೊಂಡು ಮದ್ಯಪಾನ ಮಾಡುತ್ತಿದ್ದು, ನಾವು ಒಳಗೆ ಹೋದಾಗ ಆತನು ಅರುಣ್ನನ್ನು ತಳ್ಳಿದ್ದು ಆಗ ನಾನು ಏಕೆ ತಳ್ಳುತ್ತೀಯಾ ಎಂದು ಕೇಳಿದ್ದಕ್ಕೆ ಅವನೊಂದಿಗೆ ಜಗಳ ಮಾಡಿದ್ದು ನಂತರ ಜಗಳ ಬಿಡಿಸುವ ಸಲುವಾಗಿ ಅಲ್ಲಿಗೆ ಹೋಗಲಾಗಿ ಅವನು ನನ್ನೊಂದಿಗೆ ಜಗಳ ತೆಗೆದನು.
ಆಗ ನಾನು ಅವನಿಗೆ ಒಂದು ಏಟನ್ನು ಹೊಡೆದೆ. ಆಗ ಅವನು ನನಗೆ ಹೊಡೆಯಲು ಬಂದಾಗ ನನ್ನ ಜೊತೆಯಲ್ಲಿದ್ದ ಅರುಣ್ ಕುಮಾರ್ ಅಲ್ಲಿಯೇ ಇಟ್ಟಿದ್ದ ಐಸ್ ಕ್ಯೂಬ್ ಬಕೆಟ್ ನಿಂದ ಅಪರಿಚಿತ ವ್ಯಕ್ತಿಯ ತಲೆಗೆ ಹೊಡೆದಿದ್ದು, ನಫಿ ಮತ್ತು ಶ್ರೀಕೃಷ್ಣ ಆತನ ಮೇಲೆ ಬಾಟಲ್ ಗಳನ್ನು ಎಸೆದಿದ್ದು ಬಾಲಕೃಷ್ಣ, ಅಭಿಷೇಕ್ , ಅಪ್ರೋಜ್ ಮಂಜುನಾಥ ಅವರುಗಳು ಆತನಿಗೆ ಕೈ ಕಾಲುಗಳಿಂದ ಆತನ ಮುಖ, ಕಪಾಳ ಎದೆ, ಬೆನ್ನಿನ ಭಾಗಕ್ಕೆ ಹೊಡೆದಿರುತ್ತಾರೆ.
ನಂತರ ನಾವು ಕೆಫೆ ಒಳಗಿನಿಂದ ಹೊರಕ್ಕೆ ಬಂದೆವು. ಆನಂತರ ಅಲ್ಲಿಯೇ ಸುಮಾರು ಹೊತ್ತು ಕುಳಿತುಕೊಂಡು ಯುಬಿ ಸಿಟಿಯ ಪ್ರವೇಶದ್ವಾರಕ್ಕೆ ಬಂದಾಗ ಸುಮಾರು 11.30ರ ಸಮಯ ಆಗಿತ್ತು. ಅಲ್ಲಿಂದ ಈ ಮೇಲೆ ನಾವುಗಳೆಲ್ಲರೂ ಸೇರಿಕೊಂಡು ಎದುರಾಳಿ ವ್ಯಕ್ತಿಯನ್ನು ಮಲ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುವ ಬಗ್ಗೆ ತಿಳಿದುಕೊಂಡು ಅಲ್ಲಿಗೆ ಹೋದೆವು. ಆ ಹೊತ್ತಿಗಾಗಲೇ ಮಲ್ಯ ಆಸ್ಪತ್ರೆಯ ಬಳಿ ಗಾಯಾಳು ವ್ಯಕ್ತಿಯ ಸಂಬಂಧಿಕರುಗಳು ಹಾಗೂ ಇತರ ವ್ಯಕ್ತಿಗಳೆಲ್ಲ ಸೇರಿಕೊಂಡಿದ್ದು, ನಾನೂ ಗಾಯಾಳು ವ್ಯಕ್ತಿಯನ್ನು ಮಾತನಾಡಿಸಲು ಆಗದೇ ಇದ್ದುದರಿಂದ ನಾವುಗಳೆಲ್ಲರೂ ಅಲ್ಲಿಂದ ವಾಪಸ್ಸು ಬಂದಿರುತ್ತೇವೆ. ಈ ದಿನ ನಾನು ಖುದ್ದು ಠಾಣೆಗೆ ಹಾಜರಾಗಿರುತ್ತೇನೆ. ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ನಾವು ಗಲಾಟೆ ಮಾಡಿದ ಜಾಗವನ್ನು ತೋರಿಸಿಕೊಡುತ್ತೇನೆ ಎಂದು ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.