ಮಹತ್ವದ ರಾಜಕಾರಣದ ಬೆಳವಣಿಗೆ ನಡೆದಿದೆ. ಬಿಜೆಪಿ ಸೇರಲು ನನಗೆ ಒತ್ತಡ ಬರುತ್ತಿದೆ ಎಂದು ನಾಗಠಾಣಾ ಶಾಸಕ ನಾಗಠಾಣಾ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ್ ಹೇಳಿದ್ದಾರೆ.
ವಿಜಯಪುರ[ಜು. 07] ನಾಗಠಾಣಾ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ್ ಹೊಸ ಬಾಂಬ್ ಸಿಡಿಸಿದ್ದಾರೆ. ನನಗೆ ಬಿಜೆಪಿಯಿಂದ ಆಹ್ವಾನ ಬರುತ್ತಿದೆ. ಅದರಲ್ಲೂ ವಿಜಯಪುರ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರು ಪಕ್ಷಕ್ಕೆ ಬರುವಂತೆ ಒತ್ತಡ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಆಫರ್ ನ್ನು ನಾನು ಸೂಕ್ಷ್ಮವಾಗಿ ತಿರಸ್ಕರಿಸಿದ್ದೇನೆ. ಈಗಲೂ ಕೂಡಾ ನನ್ನ ಬಿಜೆಪಿಗೆ ಸೆಳೆಯುವ ನಿರಂತರ ಪ್ರಯತ್ನ ನಡೆಯುತ್ತಿದ್ದು, ಮತದಾರರ ಮೂಲಕ ಕೂಡಾ ಒತ್ತಡ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
'ಶಾಸಕರ ರಾಜೀನಾಮೆ ಹಿಂದೆ ಸಿದ್ದರಾಮಯ್ಯ ಗೇಮ್ ಪ್ಲ್ಯಾನ್’
ನಮ್ಮ ಸಮಾಜದ ಮುಖಂಡರು ಮತ್ತು ಸ್ವಾಮೀಜಿಗಳ ಮೂಲಕವೂ ಸೆಳೆಯಲು ಪ್ರಯತ್ನ ಮಾಡಿದ್ದರು. ಆದರೆ ನಾನು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ . ಈಗಿನ ರಾಜ್ಯದ ಬೆಳವಣಿಗೆ ಸರಿಯಲ್ಲ. ಮತದಾರರು ನಮ್ಮ ಮೇಲೆ ನಂಬಿಕೆ ಇಟ್ಟು ಚುನಾಯಿಸಿದ್ದಾರೆ. ಅವರ ನಂಬಿಕೆ ಉಳಿಸಲು ಪ್ರಯತ್ನಿಸುತ್ತೇನೆ ಎಂದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ. ಆದರೆ ನಾನು ಬೆಂಗಳೂರಿಗೆ ಹೋಗುವುದಿಲ್ಲ. ನನ್ನ ಮತಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ಅವುಗಳನ್ನ ಪೂರ್ಣಗೊಳಿಸಿ ಬೆಂಗಳೂರು ಹೋಗುವ ಬಗ್ಗೆ ವಿಚಾರ ಮಾಡುತ್ತೇನೆ ಎಂದಿದ್ದಾರೆ.