
ಬೆಂಗಳೂರು(ಮೇ.10): ರೌಡಿಶೀಟರ್ ರೌಡಿ ನಾಗನ ಕಣ್ಣಾ ಮುಚ್ಚಾಲೆ ಆಟ ಮುಂದುವರೆದಿದೆ. ನಿನ್ನೆ ಮತ್ತೊಂದು ಸಿಡಿ ರಿಲೀಸ್ ಮಾಡಿದ ಬಳಿಕ ರೌಡಿ ನಾಗ ಮೌನ ತಾಳಿದ್ದಾನೆ. ಹಾಗಾದರೆ ನಾಗ ಸರೆಂಡರ್ ಆಗುತ್ತಾನಾ..? ಅಥವಾ ಪೊಲೀಸರೇ ನಾಗನನ್ನು ಬಂಧಿಸಿ ಜೈಲಿಗಟ್ಟುತ್ತಾರಾ? ಈ ಕುರಿತಾದ ವಿಸ್ಕೃತ ವರದಿ
ಪ್ರತಿನಿತ್ಯ ನವರಂಗಿ ಆಟ ಆಡುತ್ತಾ, ಕೈಗೆ ಸಿಗದೆ ತಲೆಮರಸಿಕೊಂಡಿರುವ ರೌಡಿಶೀಟರ್ ನಾಗನನ್ನು ಖೆಡ್ಡಾಗೆ ಕೆಡವಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ಯಾಕೆಂದರೆ ಶರಣಾಗುತ್ತೇನೆ ಎಂದು ಎರಡನೇ ಸಿಡಿ ರಿಲೀಸ್ ಮಾಡಿ , ಮತ್ತೆ ಪೊಲೀಸರ ವಿರುದ್ಧ ಸಮರ ಸಾರಿರುವ ನಾಗನ ಆಟಾಟೋಪ ಪೊಲೀಸರನ್ನು ಕೆರಳಿಸಿದೆ. ಇನ್ನು ನಾಗನಿಂದ ಹಣ ಕಳೆದುಕೊಂಡವರು ಪೊಲೀಸ್ ಠಾಣೆಗಳ ಮೆಟ್ಟಿಲು ಏರುತ್ತಿದ್ದಾರೆ. ಹೀಗಾಗಿ ನಾಗನ ಯಾವುದೇ ಷರತ್ತುಗಳಿಗೆ ಸೊಪ್ಪು ಹಾಕದ ಪೊಲೀಸರು ನಾಗನ ಆಟಕ್ಕೆ ಬ್ರೇಕ್ ಹಾಕಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದ್ದಾರೆ.
ನಾಗನ ತನಿಖೆಯ ಜವಾಬ್ದಾರಿ ಹೊತ್ತ ಬಾಣಸವಾಡಿ ಎಸಿಪಿ ರವಿಕುಮಾರ್, ಈಗಾಗಲೇ ನಾಗನ ಪ್ರಕರಣದಲ್ಲಿ ಹತ್ತು ಜನರನ್ನು ಬಂಧಿಸುವ ಮೂಲಕ ನಾಗನಿಗೆ ಬಿಸಿ ಮುಟ್ಟಿಸಿದ್ದಾರೆ. ಈ ಬಿಸಿ ತಟ್ಟುತ್ತಿದಂತೆಯೆ ನಿನ್ನೆ ನಾಗನ ವಕೀಲ ಶ್ರೀರಾಮರೆಡ್ಡಿ, ಕೆಲವು ಷರತ್ತುಗಳನ್ನ ಎಸಿಪಿ ರವಿಕುಮಾರ್ ಮುಂದಿಟ್ಟಿದ್ದರು. ನಾಗನ ಷರತ್ತುಗಳಿಗೆ ಸೊಪ್ಪು ಹಾಕದ ಎಸಿಪಿ ರವಿಕುಮಾರ್, ಸ್ವಯಂ ಪ್ರೇರಿತವಾಗಿ ಶರಣಾಗಲಿ, ಇಲ್ಲದಿದ್ದಲ್ಲಿ ನಾಗನ ಬಂಧನ ಖಚಿತ ಎನ್ನುವ ಸಂದೇಶ ಕೊಟ್ಟಿದ್ದಾರೆ.
ಬಂಟರ ಬಂಧನದಿಂದ ಬೆಚ್ಚಿಬಿದ್ದ ರೌಡಿ ನಾಗ
ಪೊಲೀಸರ ಕಣ್ಣು ತಪ್ಪಿಸಿ ಚಲ್ಲಾಟವಾಡುತ್ತಿರುವ ನಾಗನ ಆಟವನ್ನ ಖುದ್ದು ನಾಗನ ವಕೀಲರೇ ಸಹಿಸುತ್ತಿಲ್ಲ. ನಾಗನ ಪರ ವಕಾಲತ್ತು ವಹಿಸುತ್ತಿರುವ ವಕೀಲರಾದ ಶ್ರೀರಾಮರೆಡ್ಡಿ ಮತ್ತು ನರೇಶ್ ಕೂಡಾ ಹಲವಾರು ಬಾರಿ ನಾಗನ ಜೊತೆ ಮಾತುಕತೆ ನಡೆಸಿ ಪೊಲೀಸರ ಮುಂದೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ನಾಗ ವಕೀಲರ ಮಾತಿಗೂ ಕಿವಿ ಕೊಡುತ್ತಿರಲ್ಲಿಲ್ಲ , ಆದರೆ ಯಾವಾಗ ನಾಗನ ಬಂಟರನ್ನು ಪೊಲೀಸರು ಬಂಧಸಿದರೋ ಆಗ ಬೆಚ್ಚಿಬಿದ್ದ ನಾಗ ತಾನೇ ಶರಣಾಗಲು ನಿರ್ಧರಿಸಿದ್ದಾನೆ ಎನ್ನಲಾಗಿದೆ. ಆದರೆ ಯಾವಾಗ , ಯಾರ ಮುಂದೆ ಶರಣಾಗುತ್ತಾನೆ ಎನ್ನುವುದಷ್ಟೇ ಆತನಿಗೆ ಗೊತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.