
ಮೈಸೂರು(ನ.07): ಮೈಸೂರಿನಲ್ಲಿ ನಡೆದಿರುವ ಮಕ್ಕಳ ಮಾರಾಟ ಪ್ರಕರಣದಲ್ಲಿ ಮೈಸೂರು ಪೊಲೀಸರು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಈವರೆಗೆ ಆರೋಪಿಗಳಿಂದ ಮಾರಾಟವಾಗಿದ್ದ 8 ಶಿಶುಗಳನ್ನು ರಕ್ಷಿಸಿ 8 ದುಷ್ಕರ್ಮಿಗಳನ್ನೂ ಬಂಧಿಸಿದ್ದಾರೆ. 8 ನೇ ಆರೋಪಿಯನ್ನ ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಈಗಾಗಲೇ ಯುಎಸ್ಎ, ದುಬೈ ಸೇರಿರುವ ಮಕ್ಕಳನ್ನ ವಾಪಸ್ ಕರೆಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಈ ಮಕ್ಕಳ ಕಳ್ಳತನ ಹಾಗೂ ಮಾರಾಟ ಪ್ರಕರಣದ ಆಳ ಮತ್ತು ಅಗಲ ಎಷ್ಟು ಅಂತ ಪೊಲೀಸರಿಗೆ ನಿಖರವಾಗಿ ಹೇಳುವುದಕ್ಕೇ ಆಗುತ್ತಿಲ್ಲ. ಪ್ರಕರಣದಲ್ಲಿ ಸಿಕ್ಕಿ ಬೀಳುತ್ತಿರುವ ಪ್ರತಿಯೊಬ್ಬ ಆರೋಪಿಯೂ ಮತ್ತೊಬ್ಬ ಆರೋಪಿಯ ಹೆಸರನ್ನು ಹೇಳುತ್ತಲೇ ಇದ್ದಾನೆ. ಹಾಗಾಗಿ, ಮಕ್ಕಳ ಕಳ್ಳತನ ಹಾಗೂ ಮಾರಾಟ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಭಾನುವಾರ ಮೈಸೂರಿನಲ್ಲಿ ಮದನ್ ಲಾಲ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ 15 ದಿನಗಳಿಂದ ಪಾತಾಳ ಗರಡಿ ಹಿಡಿದಿರುವ ಮೈಸೂರು ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳಾದ ಉಷಾ ಫ್ರಾನ್ಸಿಸ್ ಹಾಗೂ ಪತಿ ಫ್ರಾನ್ಸಿಸ್ ಹೇಳಿಕೆ ಆಧಾರದ ಮೇಲೆ ಈವರೆಗೆ 8 ಮಕ್ಕಳನ್ನ ರಕ್ಷಣೆ ಮಾಡಲಾಗಿದೆ. ಆದರೆ ಆ ಮಕ್ಕಳ ಪೋಷಕರು ಯಾರು ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಒಟ್ಟಾರೆ ಪ್ರಕರಣದಲ್ಲಿ 8 ಮಕ್ಕಳನ್ನು ರಕ್ಷಿಸಿರುವ ಪೊಲೀಸರ ಕೆಲಸ ಗಮನಾರ್ಹವೇ. ಆದರೆ ಮೃತ್ಯುಕೂಪದಲ್ಲಿ ಸಿಲುಕಿ ವಿದೇಶದಲ್ಲಿ ಉಳಿದುಕೊಂಡಿರೋ ಹಸುಗೂಸುಗಳನ್ನ ಹೇಗೆ ಹಿಂಪಡೆಯುತ್ತಾರೆ? ಉಳಿದ ತಿಮಿಂಗಿಲಗಳನ್ನು ಎಷ್ಟು ಬೇಗ ಬಂಧಿಸುತ್ತಾರೆ ಅನ್ನೋದೇ ನಮ್ಮ ಮುಂದಿರುವ ಪ್ರಶ್ನೆ.
ಮಧು.ಎಂ.ಚಿನಕುರಳಿ, ಸುವರ್ಣ ನ್ಯೂಸ್, ಮೈಸೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.