
ಮೈಸೂರು (ನ.22): ಮೈಸೂರು ಪಾಕ್ ಬಗ್ಗೆ ಅತಿ ದೊಡ್ಡ ವಿವಾದ ಇದೀಗ ಭುಗಿಲೆದ್ದಿದೆ. ಮೈಸೂರು ಪಾಕ್ ಕರ್ನಾಟಕದ ಸಿಹಿ ತಿಂಡಿನೇ ಅಲ್ಲ ಅನ್ನೋ ಮಾತು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹೆಸರಲ್ಲೇ ಮೈಸೂರು ಅಂತಿದ್ದರೂ ಇದಕ್ಕೂ ಮೈಸೂರಿಗೂ ಸಂಬಂಧ ಇಲ್ಲ ಅಂತಿದ್ದಾರೆ ವಿರೋಧಿಗಳು. ನೆರೆ ರಾಜ್ಯ ತಮಿಳುನಾಡಿನವರು ಮೈಸೂರ್ ಪಾಕ್ ಬಗ್ಗೆ ಕ್ಯಾತೆ ತೆಗೆದಿದ್ದಾರೆ.
ಕಾವೇರಿ ವಿವಾದ ಸದ್ಯಕ್ಕೇನೋ ಸೈಲೆಂಟಾಗಿದೆ. ದೇವರ ದಯೆಯಿಂದ ಮಳೆ ಬಂದು, ವಿವಾದ ತಣ್ಣಗಾಗಿದೆ. ಕಾವೇರಿದ ವಿವಾದ ಕೂಲಾಯ್ತಲ್ಲ ಅನ್ನುವಷ್ಟರಲ್ಲಿ ತಮಿಳುನಾಡು ಮತ್ತೆ ಕರ್ನಾಟಕವನ್ನ ಕೆಣಕಿದೆ. ಅದೂ ಮೈಸೂರ್ಪಾಕ್ ವಿಚಾರದಲ್ಲಿ. ಈಗ ನಡೆಯುತ್ತಿರುವ ವಾದ-ವಿವಾದಗಳು ನಿಜಕ್ಕೂ ಭಯಾನಕವಾಗಿದೆ. ಅಂದು ಕಾವೇರಿಗಾಗಿ ಕ್ಯಾತೆ ತೆಗದವರು, ಇಂದು ಮೈಸೂರು ಪಾಕ್ಗಾಗಿ ಕ್ಯಾತೆ ತೆಗೆದಿದ್ದಾರೆ. ಮೈಸೂರ್ಪಾಕ್ ಮೈಸೂರಿನದ್ದು ಅಲ್ವೆ ಅಲ್ಲ ಅಂತ ಪಟ್ಟು ಹಿಡಿದು ಕೂತಿದ್ದಾರೆ. ಮೈಸೂರ್ ಪಾಕ್ ಮೇಲೆ ಕರ್ನಾಟಕಕ್ಕಾಗಲೀ, ಮೈಸೂರಿಗಾಗಲೀ ಹಕ್ಕೇ ಇಲ್ಲ ಅನ್ನೋ ವಾದ ಮಂಡಿಸುತ್ತಿದ್ದಾರೆ ತಮಿಳುನಾಡಿನ ಜನ. ಅದು ನಮ್ಮ ಸ್ವತ್ತು ಎನ್ನುತ್ತಿದ್ದಾರೆ.
ಮೈಸೂರ್ ಪಾಕ್ ಹಿಂದಿನ ಇತಿಹಾಸ ಕೆದಕುತ್ತಾ ಹೋದರೆ, ಅದು ಹೋಗಿ ಮುಟ್ಟೋದು ಕ್ರಿ.ಶ.1900ರ ಕಾಲಘಟ್ಟಕ್ಕೆ. ಆಗ ಮೈಸೂರನ್ನ ಆಳುತ್ತಿದ್ದದು ಮೈಸೂರಿನ ಸಂಸ್ಥಾನದ ಖ್ಯಾತ ಒಡೆಯರ್ ಆಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್. ಅದೊಂದು ದಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹೊಸದಾದ ಸಿಹಿಯನ್ನ ತಯಾರಿಸುವಂತೆ ಅಡುಗೆಯವರಿಗೆ ಹೇಳಿದರಂತೆ. ಆಗ ಹಿಂದೆಂದೂ ಕಂಡು ಕೇಳರಿಯದ ಹೊಸ ಸ್ವೀಟನ್ನ ಅವರು ತಯಾರಿಸಿದರಂತೆ. ಅದನ್ನ ತಿಂದು ಸಂತುಷ್ಟರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹೊಸ ಖಾದ್ಯಕ್ಕೊಂದು ಹೆಸರು ಕೊಟ್ರು. ಆ ಸಿಹಿ ಖಾದ್ಯವೇ ಮೈಸೂರ್ ಪಾಕ್. ಇಂಥಾ ಮೈಸೂರ್ ಪಾಕ್ ನಮ್ಮ ಸಿಹಿ ಪದಾರ್ಥ ಅಂತಿದೆ ತಮಿಳುನಾಡು. ಅದನ್ನ ಕಂಡು ಹಿಡಿದಿದ್ದೇ ನಾವು ಅಂತ ಒಂದಷ್ಟು ಸಾಕ್ಷಿಗಳನ್ನೂ ನೀಡುತ್ತಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಈ ವಿವಾದ ಭುಗಿಲೆದ್ದಿದೆ. ಟ್ವೀಟರ್ ಮತ್ತು ಫೇಸ್'ಬುಕ್ಗಳ ಮೂಲಕ ಮೈಸೂರ್ ಪಾಕ್ ನಮ್ಮದು ಅಂತ ರಣಕಹಳೆ ಊದುತ್ತಿದ್ದಾರೆ ತಮಿಳುನಾಡಿನ ಜನ. ಇದೇ ಕಾರಣಕ್ಕೆ, ಮೈಸೂರ್ ಪಾಕ್ ಈಗ ಭಾರೀ ಸದ್ದು ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.