
ಮೈಸೂರು(ಡಿ.07): ಮೈಸೂರಿನಲ್ಲಿ ನಡೆದ ಎಸಿಬಿ ದಾಳಿಯಲ್ಲಿ ಭರ್ಜರಿ ತಿಮಿಂಗಲವೊಂದು ಸಿಕ್ಕಿಬಿದ್ದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್ ಬಲೆಗೆ ಬಿದ್ದಿದ್ದು, ಅಕ್ರಮ ಆಸ್ತಿ ಸಂಪಾದನೆ ಬೆತ್ತಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಮಹೇಶ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ವಿಜಯನಗರದ ನಿವಾಸದ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಅಕ್ರಮ ಆಸ್ತಿಯ ದಾಖಲೆ ಹಾಗೂ ಚಿನ್ನಾಭರಣಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
1 ಕೆಜಿ ಚಿನ್ನ, 3 ಕಾರು, 23 ಲಕ್ಸುರಿ ವಾಚ್!: ಮಹೇಶ್ ಮನೆ ತಪಾಸಣೆ ವೇಳೆ 1 ಕೆಜಿ ಚಿನ್ನ, 3 ಐಷಾರಾಮಿ ಕಾರು, 50 ಸಾವಿರ ನಗದು ಹಾಗೂ 23 ಲಕ್ಸುರಿ ವಾಚ್ಗಳು ಸಿಕ್ಕಿವೆ. ಮನೆಯನ್ನೇ ಮಿನಿ ಬಾರ್ ಮಾಡಿಕೊಂಡಿರೋ ಆಸಾಮಿ ಈತ. ಸುಮಾರು 12 ಲಕ್ಷ ಕರ್ಚು ಮಾಡಿ ತಾನು ಮತ್ತು ಮಗಳು ಗಾಲ್ಫ್ ಕ್ಲಬ್ನ ಸದಸ್ಯತ್ವ ಪಡೆದುಕೊಂಡು ವಿಲಾಸಿ ಜೀವನ ನಡೆಸುತ್ತಿದ್ದ.
ಕೋಟಿ ಮೀರುವ ಬಂಗಲೆ, ಮುಗಿಯದ ಲೆಕ್ಕ!: ಇಷ್ಟೇ ಅಲ್ಲ.. ಮೂಡಾದ ಭ್ರಷ್ಟ ಅಧಿಕಾರಿ ಮಹೇಶ್ ಜೆಪಿ ನಗರದಲ್ಲಿ ಒಂದು ಪ್ಲಾಟ್, ದಟ್ಟಕಳ್ಳಿಯಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಸಂಪಾದಿಸಿದ್ದಾನೆ. ಒಂದು ಕೋಟಿ ರುಪಾಯಿ ಮೀರುವ ಬಂಗಲೆಯನ್ನೂ ಕಟ್ಟಿಸಿದ್ದಾನೆ. ಎರಡು ಲಾಕರ್ಗಳನ್ನ ವಶಕ್ಕೆ ಪಡೆದಿರೋ ಎಸಿಬಿ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಶುರುವಾದ ಲೆಕ್ಕಾಚಾರ ಮಧ್ಯರಾತ್ರಿ ಆದರೂ ಮುಗಿದಿಲ್ಲ.
ಮುಡಾದ ಆಯಕಟ್ಟಿನ ಹುದ್ದೆಯಲ್ಲಿ ಕೂತಿರೋ ಆಸಾಮಿ ವರ್ಷಗಳಿಂದ ಸಾಕಷ್ಟು ಅಕ್ರಮ ಆಸ್ತಿಯನ್ನೇ ಸಂಪಾದನೆ ಮಾಡಿದ್ದಾನೆ. ಆರಂಭದಲ್ಲಿ 18 ಸಾವಿರ ಸಂಬಳಕ್ಕೆ ಸೇರಿದವನಿಗೆ ಈಗ ಪಡೀತಿರೋದು 30 ಸಾವಿರ ಸಂಬಳ. ಆದರೆ. ಈತನ ಆಸ್ತಿ ಲೆಕ್ಕ ಮಾತ್ರ 20 ಕೋಟಿಯನ್ನೂ ಮೀರುತ್ತಿದ್ದು, ಇಷ್ಟು ಆಸ್ತಿ ಹೇಗೆ ಸಂಪಾದನೆ ಮಾಡಿದ ಅನ್ನೋದು ಜಗತ್ತಿಗೆ ಗೊತ್ತಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.