
ಚಿತ್ರದುರ್ಗ : ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಂಸದ ಬಿ. ಶ್ರೀರಾಮಲು ಅವರು ಚಳ್ಳಕೆರೆ ತಾಲೂಕಿನ ನಲಗೇತನಹಟ್ಟಿಯಲ್ಲಿ ಬುಧವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿ ಗಮನ ಸೆಳೆದರು.
ತೆಲುಗು ಭಾಷಿಕರೇ ಅಧಿಕವಾಗಿರುವ ಈ ಗ್ರಾಮದಲ್ಲಿ ತೆಲುಗು ಮಿಶ್ರಿತ ಕನ್ನಡದಲ್ಲಿಯೇ ರಾಮುಲು ಜನರೊಂದಿಗೆ ಮಾತನಾಡಿ ಸಮಸ್ಯೆ ಆಲಿಸಿದರು. ರಾಮುಲು ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಾತ್ರಿ 11 ಗಂಟೆಗೆ ಗ್ರಾಮಕ್ಕೆ ಆಗಮಿಸಿದ ಶ್ರೀರಾಮುಲುಗೆ ಅದ್ಧೂರಿ ಸ್ವಾಗತ ದೊರೆಯಿತು. ಗ್ರಾಮದ ಪರಿಶಿಷ್ಟಜಾತಿಯ ಮಂಜುಳಾ ಮತ್ತು ದುರುಗಪ್ಪ ದಂಪತಿಯ ಗುಡಿಸಲಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಮಂಜುಳಾ ಹಾಗೂ ದುರುಗಪ್ಪ ದಂಪತಿ ಮಾಡಿದ್ದ ರಾಗಿರೊಟ್ಟಿಹಾಗೂ ಹಾಗಲಕಾಯಿ ಪಲ್ಯ ಸವಿದ ಶಾಸಕರು, ಗುಡಿಸಲಿನ ಮೂಲೆಯಲ್ಲಿ ಹಾಸಿದ್ದ ಚಾಪೆ ಮೇಲೆ ಮಲಗಿದರು.
ಮುಕ್ಕಾಲು ತಾಸು ಶಿವಪೂಜೆ: ಗುರುವಾರ ಮುಂಜಾನೆ 5ಕ್ಕೆ ಎದ್ದು ಗ್ರಾಮದ ಕಾಂಕ್ರಿಟ್ ರಸ್ತೆಯಲ್ಲಿ ಒಂದು ಸುತ್ತು ಹಾಕಿದ ರಾಮುಲು ನಂತರ ಗುಡಿಸಲಿಗೆ ತೆರೆಳಿ ಅದರ ಮುಂಭಾಗವೇ ಇಪ್ಪತ್ತು ನಿಮಿಷ ಪ್ರಾಣಾಯಾಮ ಮಾಡಿ ಪತ್ರಿಕೆಗಳ ಮೇಲೆ ಕಣ್ಣಾಯಿಸಿದರು. ಬಳಿಕ ತಡಿಕೆಗಳಿಂದ ಮಾಡಿದ ಬಚ್ಚಲು ಮನೆಯಲ್ಲಿ ಝಳಕ ಮಾಡಿ ಅಲ್ಲಿನ ಜನರ ಜೊತೆ ಸಹಜವಾಗಿಯೇ ಕಾಲ ಕಳೆದರು. ನಂತರ ಮುಕ್ಕಾಲು ತಾಸು ಜಾಗಟೆ ಹಾಗೂ ಮಂತ್ರೋದ್ಘೋಷದ ನಡುವೆ ಶಿವಪೂಜೆ ಮಾಡಿದರು. ಗುಡಿಸಿಲಿನ ಮೂಲೆಯಲ್ಲಿಯೇ ಶಿವಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.