ದಯೆಯೇ ಧರ್ಮದ ಮೂಲ: ಮುಸ್ಲಿಂ ಕುಟುಂಬಕ್ಕೆ ಅನ್ನದಾತನಾದ ಕಾಶ್ಮೀರಿ ಪಂಡಿತ!

By Web DeskFirst Published Mar 3, 2019, 9:43 PM IST
Highlights

ಮಾನವೀಯತೆಗಿಂತ ಮಿಗಿಲಾದ ಧರ್ಮ ಯಾವುದಿದೆ?| ಧರ್ಮದ ಅಮಲಿನಲ್ಲಿ ಕತ್ತಿ ಎತ್ತುವವರ ಮಧ್ಯೆ ಮಾನವೀಯತೆಯ ಹರಿಕಾರರು|  ಮುಸ್ಲಿಂ ಕುಟುಂಬಕ್ಕೆ ಅನ್ನದಾತನಾದ ಕಾಶ್ಮೀರಿ ಪಂಡಿತ| ರಾಜಾ ಬೇಗಂ ಬಡತನ ಕಂಡು ಕಣ್ಣೀರಿಟ್ಟ ರಂಜನ್ ಜ್ಯೋತ್ಶಿ| ಹಿಂದೂ ಪಂಡಿತ ಸಮುದಾಯದ ನೆರವಿನಿಂದ ಮುಸ್ಲಿಂ ಕುಟುಂಬಕ್ಕೆ ಆರ್ಥಿಕ ನೆರವು|

ಅನಂತನಾಗ್(ಮಾ.03): ಧರ್ಮದ ಹೆಸರಲ್ಲಿ ಸಾಯಲು, ಕೊಲ್ಲಲು ಪ್ರಚೋದನೆ ನೀಡುವವರಿದ್ದಾರೆ. ರಾಜಕಾರಣದಲ್ಲಿ ಧರ್ಮ ಬೆರೆಸಿದಾಗ ಮಾತ್ರ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಎತ್ತುವುದು. ಆದರೆ ತಮ್ಮ ಧರ್ಮವನ್ನು ತಮ್ಮ ಮನೆಗಷ್ಟೇ ಸಿಮೀತಗೊಳಿಸಿಕೊಂಡವರಿಗೆ ಇದೆಲ್ಲಾ ಪ್ರಭಾವ ಬೀರುವುದಿಲ್ಲ.

ವಿವಿಧತೆ ಭಾರತದ ಆತ್ಮ. ಈ ನೆಲದಲ್ಲಿ ನೆಲೆಸಿರುವವರು ಧರ್ಮದ ಕಾರಣಕ್ಕೆ, ಜಾತಿಯ ಕಾರಣಕ್ಕೆ ಒಬ್ಬರನ್ನು ದೂರ ಮಾಡುವವರಲ್ಲ. ಹಾಗೆ ದೂರ ಮಾಡಿದವರು ತಮ್ಮ ಧರ್ಮದ ಕುರಿತು ಹೊಂದಿರುವ ತಪ್ಪು ಅಭಿಪ್ರಾಯ ಹೊಂದಿರುವವರೇ ಆಗಿರುತ್ತಾರೆ.

ಹೀಗೆ ಧರ್ಮದ ಅಮಲು ಏರಿಸಿಕೊಂಡ ಕಾಶ್ಮೀರಿ ಜಿಹಾದಿಗಳು ಶತಶತಮಾನಗಳಿಂದ ಅಲ್ಲಿ ನೆಲೆಸಿದ್ದ ಹಿಂದೂ ಪಂಡಿತರನ್ನು ಹಿಂಸಿಸಿ ಓಡಿಸಿದರು. ಆದರೆ ತಮ್ಮ ಮೇಲೆ ದೌರ್ಜನ್ಯ ನಡೆದಾಗಲೂ ಮತ್ತೊಂದು ಧರ್ಮವನ್ನು ದ್ವೇಷಿಸದೇ,  ಧರ್ಮದ  ಜನರನ್ನು ದೂರ ಮಾಡದೇ ಬದುಕಿ ತೋರಿಸಿದವರು ಕಾಶ್ಮೀರಿ ಹಿಂದೂ ಪಂಡಿತರು.

ಅದರಂತೆ ತೀವ್ರ ಬಡತನದಲ್ಲಿದ್ದ ಮುಸ್ಲಿಂ ಕುಟುಂಬವೊಂದಕ್ಕೆ ಕಾಶ್ಮೀರಿ ಹಿಂದೂ ಪಂಡಿತರೊಬ್ಬರು ಸಹಾಯ ಮಾಡಿದ ರೋಚಕ ಕತೆ ಇಲ್ಲಿದೆ ನೋಡಿ.

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಪಾತ್ ನಗರ್ ದಲ್ಲಿರುವ 68 ವರ್ಷದ ರಾಜಾ ಬೇಗಂ ಮತ್ತು ಮೋಯಿನುದ್ದೀನ್ ತೀವ್ರತರವಾದ ಬಡತನವನ್ನು ಎದುರಿಸುತ್ತಿದ್ದರು. ಇಬ್ಬರು ಗಂಡು ಮಕ್ಕಳು ಮತ್ತೊಂದು ಊರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಆದರೆ ಅದರಲ್ಲಿ ಒಬ್ಬಾತ ಡ್ರಗ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡ.

ಹೀಗಾಗಿ ಮಕ್ಕಳಿದಂದ ಬರುತ್ತಿದ್ದ ಆರ್ಥಿಕ ನೆರವೂ ನಿಂತು ಹೋಗಿ ರಾಜಾ ಬೇಗಂ ಮತ್ತು ಮೊಯಿನುದ್ದೀನ್ ಅದೆಷ್ಟೋ ಉಪವಾಸದ ದಿನಗಳನ್ನು ಕಳೆದಿದ್ದಾರೆ.

ಆದರೆ 2010ರಲ್ಲಿ ಪ್ರಧಾನಮಂತ್ರಿ ಪುನರ್ವಸತಿ ಯೋಜನೆಯ ಭಾಗವಾಗಿ ಕಾಶ್ಮಿರಕ್ಕೆ ಮರಳಿದ ಹಿಂದೂ ಪಂಡಿತ ರಂಜನ್ ಜ್ಯೋತ್ಶಿ, ರಾಜಾ ಬೇಗಂ ಕುಟುಂಬಕ್ಕೆ ನೆರವಾಗಿದ್ದಾರೆ.  ರಾಜಾ ಬೇಗಂ ಕುಟುಂಬದ ಸ್ಥಿತಿ ನೋಡಲಾಗದೇ ಕೂಡಲೇ ಅವರಿಗೆ ವಾರಕ್ಕೆ ಆಗುವಷ್ಟು ಡುಗೆ ಸಾಮಾನುಗಳನ್ನು ರಂಜನ್ ಜ್ಯೋತ್ಶಿ ಕಳುಹಿಸಿದ್ದಾರೆ.

ಇಷ್ಟೇ ಅಲ್ಲದೇ ಕಾಶ್ಮೀರಿ ಹಿಂದೂ ಪಂಡಿತ ಸಮುದಾಯದ ಹಿರಿಯರೊಂದಿಗೆ ಮಾತನಾಡಿ ರಾಜಾ ಬೇಗಂ ಕುಟುಂಬಕ್ಕೆ ಆರ್ಥಿಕ ಸಹಾಯ ಕೊಡಿಸುವಲ್ಲಿಯೂ ರಂಜನ್ ಯಶಸ್ವಿಯಾಗಿದ್ದಾರೆ.

ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎನ್ನುವ ರಂಜನ್, ಕಣಿವೆಯಲ್ಲಿ ಹಿಂದೂ-ಮುಸ್ಲಿಮರು  ಸಹಬಾಳ್ವೆಯಿಂದ ಬದುಕುತ್ತಿದ್ದು, ಕೆಲವರ ಜಿಹಾದಿ ಮನಸ್ಥಿತಿ ಮತ್ತು ರಾಜಕಾರಣದಿಂದಾಗಿ ದ್ವೇಷ ಸೃಷ್ಟಿಸಲಾಗುತ್ತಿದೆ ಎಂದು ಹೇಳುತ್ತಾರೆ ರಂಜನ್ ಜ್ಯೋತ್ಶಿ.

click me!