'ಕಾಂಗ್ರೆಸ್ಸಿಂದ ನ್ಯಾಯ ಸಿಗದಿದ್ರೆ ನನ್ನ ದಾರಿ ನನಗೆ'

By Web DeskFirst Published Sep 19, 2018, 11:43 AM IST
Highlights

ನಿನ್ನೆ ಮೊನ್ನೆ ಬಂದವರಿಗೆಲ್ಲ ಸಚಿವ ಸ್ಥಾನ ಕೊಟ್ಟಿದ್ದಾರೆ. ಆದರೆ ಮೂರು ಬಾರಿ ಶಾಸಕನಾದರೂ ನನ್ನನ್ನು ಮಂತ್ರಿ ಮಾಡಿಲ್ಲ. ಇದು ಬೇಸರ ತರಿಸಿದ್ದು, ನ್ಯಾಯ ಸಿಗದಿದ್ದರೆ ಯಾವುದೇ ನಿರ್ಧಾರ ಕೈಗೊಳ್ಳಲು ಸಿದ್ಧ

ಬೆಂಗಳೂರು(ಸೆ.19): ಪಕ್ಷದ ನಾಯಕರಿಂದ ನ್ಯಾಯ ಸಿಗದಿದ್ದರೆ ನನ್ನ ದಾರಿ ನನಗೆ. ಕಾರ್ಯಕರ್ತರು ಸೂಚಿಸಿದರೆ ಬೇರೆ ಪಕ್ಷಕ್ಕೂ ಸೇರಲು ಸಿದ್ಧ ಎಂದು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಮತ್ತೊಮ್ಮೆ ಹೇಳಿದ್ದಾರೆ.

ಮಂಗಳವಾರ ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ವಾಭಿಮಾನ ಕೊಂದುಕೊಂಡು ನಾನು ಪಕ್ಷದಲ್ಲಿ ಇರುವುದಿಲ್ಲ. ಪಕ್ಷಕ್ಕೆ ದುಡಿದವರಿಗೆ ಇಲ್ಲಿ ಬೆಲೆಯಿಲ್ಲ ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಶಾಸಕನಾಗಿದ್ದೇನೆ. ಆದರೆ ನಿನ್ನೆ ಮೊನ್ನೆ ಬಂದವರಿಗೆಲ್ಲ ಸಚಿವ ಸ್ಥಾನ ಕೊಟ್ಟಿದ್ದಾರೆ. ಆದರೆ ಮೂರು ಬಾರಿ ಶಾಸಕನಾದರೂ ನನ್ನನ್ನು ಮಂತ್ರಿ ಮಾಡಿಲ್ಲ. ಇದು ಬೇಸರ ತರಿಸಿದ್ದು, ನ್ಯಾಯ ಸಿಗದಿದ್ದರೆ ಯಾವುದೇ ನಿರ್ಧಾರ ಕೈಗೊಳ್ಳಲು ಸಿದ್ಧ’ ಎಂದರು. ‘ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನನಗೆ ಸೂಕ್ತ ಸ್ಥಾನ ಸಿಗುತ್ತಿಲ್ಲ.

ಇದೀಗ ನಮ್ಮ ತಾಲೂಕನ್ನು ನಿರ್ಲಕ್ಷಿಸಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್ಚು ಅನುದಾನ ಸಿಕ್ಕಿತ್ತು. ಆದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಬಜೆಟ್ ಮಂಡನೆ ಮಾಡಿದ್ದರೂ ತಾಲೂಕಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಯಾವುದೇ ಕೆಲಸ ನಡೆಯುತ್ತಿಲ್ಲ. ಕ್ಷೇತ್ರದ ಜನರಿಗೆ ಮತ್ತು ಕಾರ್ಯಕರ್ತರಿಗೆ ಏನು ಉತ್ತರಿಸಬೇಕೆಂದೇ ತಿಳಿಯುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನನ್ನೊಂದಿಗೆ ಮಾತನಾಡಿದ್ದಾರೆ. ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ನ್ಯಾಯ ಸಿಗದಿದ್ದರೆ ನನ್ನ ದಾರಿ ನನಗೆ ಎಂದರು.

click me!