
ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ನೀಡಿರುವ ಲೈಂಗಿಕ ಕಿರುಕುಳದ ಆರೋಪದ ತನಿಖೆ ನಡೆಸುತ್ತಿರುವ ಪೊಲೀಸರು, ಬುಧವಾರ ಇನ್ನೂ ಮೂರು ಮಂದಿಯ ವಿಚಾರಣೆ ನಡೆಸಿದ್ದಾರೆ.
ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಬ್ಬನ್ ಪಾರ್ಕ್ ಪೊಲೀಸರು, ವಿಸ್ಮಯ ಚಿತ್ರ ನಿರ್ದೇಶಕ ಆರುಣ್ ವೈದ್ಯನಾಥನ್, ಶೃತಿ ಸಹಾಯಕ ಬೋರೇಗೌಡ, ಶೃತಿ ಗೆಳತಿ ಯಶಸ್ವಿನಿ ವಿಚಾರಣೆ ನಡೆಸಿದ್ದಾರೆ.
ಪ್ರಕರಣ ಸಂಬಂಧಿಸಿದಂತೆ ನಿನ್ನೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಕಿರಣ್ ಮತ್ತು ಮೋನಿಕಾ, ವಿಸ್ಮಯ ಚಿತ್ರ ತಂಡದ ಇನ್ನೂ ಕೆಲವರ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಹಿನ್ನಲೆಯಲ್ಲಿ ಆ ಹತ್ತು ಮಂದಿಯನ್ನೂ ಠಾಣೆಗೆ ಕರೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
"
ತನಿಖಾಧಿಕಾರಿ ಪಿಎಸ್ಐ ರೇಣುಕಾ ಎದುರು ಹೇಳಿಕೆ ನೀಡಿದ ನಿರ್ದೇಶಕ ಅರುಣ್ ವೈದ್ಯನಾಥನ್, ಆರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಇಬ್ಬರು ಉತ್ತಮ ನಟ, ನಟಿಯರು. ಅರ್ಜುನ್ ಸರ್ಜಾ ಚಿತ್ರದ ಕೆಲವು ಸೀನ್ ಗಳಿಗೆ ಕತ್ತರಿ ಹಾಕುವಂತೆ ಹೇಳಿದ್ದರು. ಚಿತ್ರದಲ್ಲಿ ಇನ್ನೂ ಎರಡು ಬೆಡ್ ರೂಂ ಸೀನ್ಗಳಿತ್ತು. ಅವುಗಳಿಗೆ ಕತ್ತರಿ ಹಾಕುವಂತೆ ಅರ್ಜುನ್ ಸರ್ಜಾ ಹೇಳಿದ್ದರು.
ಸ್ಕ್ರಿಪ್ಟ್ ಸಂದರ್ಭದಲ್ಲೇ ಅವುಗಳನ್ನು ತೆಗೆಯುವಂತೆ ಹೇಳಿದ್ದರು, ಎಂದು ಬಹಿರಂಗ ಪಡಿಸಿದ್ದಾರೆ.
ಮುಂದುವರಿದು, ಚಿತ್ರೀಕರಣ ವೇಳೆ ಕಿರುಕುಳ ನಡೆದಂತಹ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಚಿತ್ರೀಕರಣ ಮುಗಿದ ನಂತರ ಹೊರಗಡೆ ಏನಾದ್ರು ನಡೆದಿದೆಯಾ ಎಂಬುದರ ಬಗ್ಗೆ ಮಾಹಿತಿ ಇಲ್ಲ., ಎಂದು ಈ ಹಿಂದೆ ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದ ಮಾಹಿತಿಯನ್ನೇ ಆರುಣ್ ವೈದ್ಯನಾಥನ್ ನೀಡಿದ್ದಾರೆ.
ವಿಸ್ಮಯ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಶೃತಿ ಹರಿಹರನ್ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಆರೋಪಿಸಿದ್ದರು. ಶೃತಿ ಆರೋಪವು ಸ್ಯಾಂಡಲ್ವುಡ್ನಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ದಿನಕ್ಕೊಂದು ತಿರುವು ಪಡೆದ #MeToo ಆರೋಪವು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ನಟ-ನಟಿಯರಿಬ್ಬರ ನಡುವೆ ಚಿತ್ರಮಂಡಳಿಯು ಸಂಧಾನಕ್ಕೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.