ಮಾಧ್ಯಮಗಳು ಮೌಲ್ಯಯುತವಾಗಲಿ: ಸಂತೋಷ್ ಹೆಗ್ಡೆ

By Web DeskFirst Published Aug 19, 2018, 4:57 PM IST
Highlights

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮರ್ಥವಾಗಿ ತನ್ನ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಈ ಮೂರು ಅಂಗಗಳು ತಪ್ಪು ದಾರಿಯಲ್ಲಿ ನಡೆದಾಗ ನಾಲ್ಕನೇ ಅಂಗ ಎಂದು ಕರೆಯುವ ಮಾಧ್ಯಮ ಅದನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯುತ್ತಿವೆ. ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಾಧ್ಯಮ ಕೂಡ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುವಲ್ಲಿ ಹಿಂದೆ ಬಿದ್ದಿದೆ. ಏಕೆಂದರೆ, ಇಂದು ಮಾಧ್ಯಮಗಳು ರಾಜಕಾರಣಿಗಳ ಅಥವಾ ಉದ್ಯಮಿಗಳ ಹಿಡಿತದಲ್ಲಿವೆ ಎಂದರು.

ಬೆಂಗಳೂರು[ಆ.19]: ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವ ಮಟ್ಟಕ್ಕೆ ನಮ್ಮ ಮೌಲ್ಯಗಳು ಕುಸಿದಿರುವುದು ದುರಂತ ಎಂದು ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ವಿಷಾದಿಸಿದರು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶನಿವಾರ ಕನಕಪುರ ರಸ್ತೆಯ ಶ್ರೀ ರವಿಶಂಕರ್ ಗುರೂಜೀ ಆಶ್ರಮದಲ್ಲಿ ಆಯೋಜಿಸಿದ್ದ 71ನೇ ರಾಷ್ಟ್ರೀಯ ಮಂಡಳಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮರ್ಥವಾಗಿ ತನ್ನ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಈ ಮೂರು ಅಂಗಗಳು ತಪ್ಪು ದಾರಿಯಲ್ಲಿ ನಡೆದಾಗ ನಾಲ್ಕನೇ ಅಂಗ ಎಂದು ಕರೆಯುವ ಮಾಧ್ಯಮ ಅದನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯುತ್ತಿವೆ. ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಾಧ್ಯಮ ಕೂಡ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುವಲ್ಲಿ ಹಿಂದೆ ಬಿದ್ದಿದೆ. ಏಕೆಂದರೆ, ಇಂದು ಮಾಧ್ಯಮಗಳು ರಾಜಕಾರಣಿಗಳ ಅಥವಾ ಉದ್ಯಮಿಗಳ ಹಿಡಿತದಲ್ಲಿವೆ ಎಂದರು.
ಸ್ವಾತಂತ್ರ್ಯದ ನಂತರ ದೇಶದಲ್ಲಿ ಹಲವು ಬದಲಾವಣೆಗಳಾಗಿವೆ. ಅಧಿಕಾರಕ್ಕೇರಿದ ಸರ್ಕಾರಗಳಲ್ಲಿ ಸಾವಿರಾರು ಕೋಟಿ ಮೊತ್ತದ ಹಗರಣಗಳು ನಡೆದಿವೆ. ರಾಜಕಾರಣಿಗಳು ನೈತಿಕತೆ ಕಳೆದುಕೊಳ್ಳುತ್ತಿದ್ದಾರೆ. ಮಾನವೀಯ ಗುಣಗಳು ಕಣ್ಮರೆಯಾಗುತ್ತಿವೆ. ನಾವು ಎಷ್ಟೇ ಸಂಪಾದನೆ ಮಾಡಿದರೂ ಮೊದಲು ಮಾನವರಾಗಬೇಕು. ಸಾಮಾಜಿಕ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಯುವ ಸಮುದಾಯದ ಮೇಲೆ ಈ ದೇಶದ ಭವಿಷ್ಯ ಅಡಗಿದೆ. ಹಾಗಾಗಿ ರಾಜ್ಯದ ಹಲವೆಡೆ ಶಾಲಾ-ಕಾಲೇಜುಗಳಿಗೆ ತೆರಳಿ ಸಂವಾದ ನಡೆಸುತ್ತಿದ್ದೇನೆ. ಯುವ ಸಮುದಾಯ ದೇಶವನ್ನು ಗಟ್ಟಿಯಾಗಿ ಕಟ್ಟುತ್ತಾರೆ ಎನ್ನುವ ಭರವಸೆಯಿದೆ ಎಂದು ಅವರು ಹೇಳಿದರು.

ಮಾವನೀಯ ಮೌಲ್ಯಗಳು ಜೀವಂತ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಮಾತನಾಡಿ, ಈ ಋಣಾತ್ಮಕ ಪ್ರವೃತ್ತಿ ಸದಾ ಜಾಗೃತವಾಗಿರುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕು. ಹೊರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ. ಹಾಗಾಗಿ ಮಾಧ್ಯಮಗಳು ಜನರಲ್ಲಿನ ಮೌಲ್ಯಗಳನ್ನು ಜಾಗೃತಗೊಳಿಸಬೇಕು ಎಂದರು. ಟಿ.ವಿ.ಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳು ಜನರ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತವೆ. ಹಾಗಾಗಿ ತುಸು ಎಚ್ಚರಿಕೆಯಿಂದ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು. ಸಮಾಜದ ವಾಸ್ತಾವಾಂಶ ಅರಿತು ಕರ್ತವ್ಯ ಮಾಡಬೇಕು ಎಂದರು.

ಅಟಲ್‌ಗೆ ಸಂತಾಪ: ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಮೌನಾಚರಿಸಿ ಸಂತಾಪ ಸೂಚಿಸಲಾಯಿತು. ಇತ್ತೀಚೆಗೆ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಮತ್ತು ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ಅವರನ್ನು ಸ್ಮರಿಸಲಾಯಿತು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ

ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಮಹಾಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಪತ್ರಕರ್ತರು ಉಪಸ್ಥಿತರಿದ್ದರು. ಸಮಾವೇಶದ ಭಾಗವಾಗಿ ‘ಸಮ್ಮಿಶ್ರ ಸರ್ಕಾರವೋ, ಏಕೈಕ ಪಕ್ಷಾಡಳಿತವೋ- ಯಾವುದು ನಮಗೆ ಅತ್ಯುತ್ತಮ’ ಕುರಿತು ವಿಚಾರ ಸಂಕಿರಣ ಜರುಗಿತು. ರಾಷ್ಟ್ರೀಯ ಚಿಂತಕ ಬಸವರಾಜ ಪಾಟೀಲ್, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಹಾಗೂ ಏಷ್ಯಾನೆಟ್ ಕನ್ನಡ ಡಿಜಿಟಲ್‌ನ ಪ್ರಧಾನ ಸಂಪಾದಕ ಎಸ್.ಕೆ.ಶ್ಯಾಮಸುಂದರ್ ವಿಷಯ ಮಂಡಿಸಿದರು.

click me!