ನವದೆಹಲಿ[ಜೂ.28]: ಕಾಶ್ಮೀರದ ಆಂಗ್ಲ ದೈನಿಕ ರೈಸಿಂಗ್ ಕಾಶ್ಮೀರ್ ಸಂಪಾದಕ ಶುಜಾತ್ ಬುಖಾರಿ ಹತ್ಯೆಗೆ ಹೊಸ ತಿರುವು ಸಿಕ್ಕಿದ್ದು, ಹತ್ಯೆಯ ಪ್ರಮುಖ ರೂವಾರಿ ಲಷ್ಕರ್-ಇ-ತೊಯ್ಬಾ ಮುಖಂಡ ಸ್ನಾತಕೋತ್ತರ ಪದವಿ ಪೂರೈಸಿದ್ದು ಬೆಂಗಳೂರಿನಲ್ಲಿ ಎಂಬ ಅಂಶ ಬೆಳಕಿಗೆ ಬಂದಿದೆ.
ಲಷ್ಕರ್-ಇ-ತೊಯ್ಬಾ ನೇಮಕಾತಿ ಪ್ರಕ್ರಿಯೆಯ ಮುಖಂಡನಾದ ಸಜ್ಜಾದ್ ಗುಲ್ [48] ಎಂಬಿಎ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನಲ್ಲಿ ಪಡೆದಿದ್ದ. ಮೂಲತಃ ಕಾಶ್ಮೀರದವನಾದ ಈತ ಈಗ ವಾಸವಾಗಿರುವುದು ರಾವಲ್ಪಿಂಡಿಯಲ್ಲಿ.
ಗುಲ್ ಹಾಗೂ ಎಲ್ಇಟಿ ಮುಖ್ಯಸ್ಥ ಹಫೀಜ್ ಸಯ್ಯದ್ ಅವರು ಸ್ಥಳೀಯ ಉಗ್ರರನ್ನು ಬಳಸಿ ಬುಖಾರಿ ಅವರನ್ನು ಹತ್ಯೆ ಮಾಡಿಸಿದ್ದಾರೆ ಎಂದು ಬೇಹುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಗುಲ್ ಉಗ್ರವಾದಿಯಾಗುವ ಮೊದಲು ಪ್ರಯೋಗಾಲಯದ ತಂತ್ರಜ್ಞ ತರಬೇತಿ ಪಡೆದುಕೊಂಡಿದ್ದ. ಪಾಕಿಸ್ತಾನಕ್ಕೆ ಪಲಾಯನಗೊಳ್ಳುವ ಮೊದಲು ಕಾಶ್ಮೀರ ಹಾಗೂ ದೆಹಲಿಯಲ್ಲಿ ಬಂಧಿಸಲಾಗಿತ್ತು. ಗುಲ್ ಹಾಗೂ ಹಫೀಜ್ ಸ್ಥಳೀಯರನ್ನು ಬಳಸಿಕೊಂಡು ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸುತ್ತಿದ್ದಾರೆ.ಶುಜಾತ್ ಬುಖಾರಿ ಅವರು ರಂಜಾನ್ ಸಂದರ್ಭದಲ್ಲಿ ಜೂ. 14 ರಂದು ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲು ಕಚೇರಿಯಿಂದ ತೆರಳುತ್ತಿದ್ದಾಗ ಅಪರಿಚಿತ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ್ದ.