ರಾಘವೇಂದ್ರ ಸ್ವಾಮಿ ಮಠಕ್ಕೆ ಸ್ವಚ್ಛ ಐಕಾನಿಕ್ ಕೇಂದ್ರದ ಗರಿ
ಪ್ರಧಾನಿಗೆ ಧನ್ಯವಾದ ಸಲ್ಲಿಸಿದ ಸುಭುದೇಂದ್ರ ತೀರ್ಥ ಶ್ರೀ
ಮಂತ್ರಾಲಯ ಅಭಿವೃದ್ದಿ ಕುರಿತು ಮೋದಿ ಜೊತೆ ಚರ್ಚೆ
ಸ್ಥಾನಿಕ ಸ್ವಚ್ಛತಾ ಕಮಿಟಿ ಮೂಲಕ ಸ್ವಚ್ಛತೆಗೆ ಆದ್ಯತೆ
ಆಂಧ್ರದ ತಿರುಪತಿ ಹಾಗೂ ಮಂತ್ರಾಲಯ ಮಠಕ್ಕೆ ಕೇಂದ್ರದ ಶಹಬ್ಬಾಸಗಿರಿ
ರಾಯಚೂರು(ಜೂ.13): ಕೇಂದ್ರ ಸರ್ಕಾರ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠವನ್ನು ಸ್ವಚ್ಛ ಐಕಾನಿಕ್ ಕೇಂದ್ರವೆಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗಿದೆ.
ರಾಘವೇಂದ್ರ ಸ್ವಾಮಿ ಮಠವನ್ನು ಸ್ವಚ್ಛ ಐಕಾನಿಕ್ ಕೇಂದ್ರವೆಂದು ಪರಿಗಣಿಸಿದ ಕೇಂದ್ರ ಸರ್ಕಾರಕ್ಕೆ ಸುಭುದೇಂದ್ರ ತೀರ್ಥ ಶ್ರೀಗಳು ಕೃತಜ್ಞತೆ ಸಲ್ಲಿಸಿದರು. ಈ ಕುರಿತು ಮಾತನಾಡಿರುವ ಸುಭುದೇಂದ್ರ ತೀರ್ಥ ಶ್ರೀಗಳು, ಪ್ರಮುಖ ಯಾತ್ರಾ ಸ್ಥಳವಾದ ಮಂತ್ರಾಲಯದ ಅಭಿವೃದ್ದಿ ಹಾಗೂ ಮೂಲ ಸೌಕರ್ಯ ಕುರಿತು ಈಗಾಗಲೇ ಪ್ರಧಾನಿ ಅವರ ಜೊತೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರಿಗೆ ಮಠದ ಆವರಣದ ಕುಡಿಯುವ ನೀರು, ಡ್ರೈನೆಜ್ ಸಿಸ್ಟಮ್ ಮತ್ತು ಆರೋಗ್ಯ ಸುಧಾರಣಾ ಕ್ರಮಗಳ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ಮಠದ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಶ್ರೀಗಳು ಹೇಳಿದರು. ಸ್ಥಾನಿಕ ಸ್ವಚ್ಛತಾ ಕಮಿಟಿ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿದ ಪರಿಣಾಮ ಮಠಕ್ಕೆ ಈ ಗರಿ ಲಭಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕೇವಲ ಭಾರತ ಮಾತ್ರವಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಮಠವನ್ನು ಗುರುತಿಸುವ ಕೆಲಸ ಆಗಬೇಕಿದ್ದು, ಅದಕ್ಕಾಗಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕಿದೆ ಎಂದು ಶ್ರೀಗಳು ಹೇಳಿದರು. ಆಂಧ್ರದ ತಿರುಪತಿ ಹಾಗೂ ಮಂತ್ರಾಲಯ ಮಠವನ್ನು ಕೇಂದ್ರ ಸರ್ಕಾರ ಸ್ವಚ್ಛ ಐಕಾನಿಕ್ ಕೇಂದ್ರ ಎಂದು ಗುರುತಿಸಿದೆ.