ಮಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ..? ಹೋರಾಟಕ್ಕೆ ಸಜ್ಜಾದ ಹಿಂದೂ ಸಂಘಟನೆಗಳು

By Suvarna Web DeskFirst Published Jan 1, 2018, 2:33 PM IST
Highlights

ಕಡಲ ತಡಿ ಮಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿರೋದು ಬೆಳಕಿಗೆ ಬಂದಿದೆ. ಕಾಸರಗೋಡಿನ ಪ್ರಭಾವಿ ಹಿಂದೂ ಮುಖಂಡರೊಬ್ಬರ ಪುತ್ರಿಯೇ ಜಿಹಾದ್ ಬಲೆಗೆ ಬಿದ್ದಿರೋ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಮಂಗಳೂರು (ಜ.1): ಕಡಲ ತಡಿ ಮಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿರೋದು ಬೆಳಕಿಗೆ ಬಂದಿದೆ. ಕಾಸರಗೋಡಿನ ಪ್ರಭಾವಿ ಹಿಂದೂ ಮುಖಂಡರೊಬ್ಬರ ಪುತ್ರಿಯೇ ಜಿಹಾದ್ ಬಲೆಗೆ ಬಿದ್ದಿರೋ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಈ ಬಗ್ಗೆ ಬಜರಂಗದಳ ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೂ ದೂರು ನೀಡೋ ಮೂಲಕ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.

ನಗರದ ಎಸ್ ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಕಳೆದ ಕೆಲ ತಿಂಗಳ ಹಿಂದೆಯೇ ಮುಂಬೈ ಮೂಲದ ಮಹಮ್ಮದ್ ಇಕ್ಬಾಲ್ ಎಂಬಾತನ ಜೊತೆಗೆ ತೆರಳಿದ್ದು, ಸದ್ಯ ವಿಶ್ವಹಿಂದೂ ಪರಿಷತ್ ಬಜರಂಗದಳ ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಭಾರೀ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.

ಮೂಡಬಿದ್ರೆ ಮತ್ತು ಮೈಸೂರು ಪ್ರಕರಣದ ಬೆನ್ನಲ್ಲೇ ಹಿಂದೂ ಮುಖಂಡರೊಬ್ಬರ ಪುತ್ರಿಯೇ ಲವ್ ಜಿಹಾದ್ ಗೆ ಸಿಲುಕಿರೋದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾಸರಗೋಡು ಮೂಲದ ಪ್ರಭಾವಿ ಹಿಂದೂ ಮುಖಂಡ ಸದ್ಯ ಮಂಗಳೂರಿನಲ್ಲಿ ನೆಲೆಸಿರೋ ವ್ಯಕ್ತಿಯೊಬ್ಬರ ಮಗಳಿಗೆ ಆರು ವರ್ಷಗಳ ಹಿಂದೆಯೇ ಫೇಸ್ ಬುಕ್ ನಲ್ಲಿ ಇಕ್ಬಾಲ್ ಪರಿಚಯವಾಗಿದ್ದು, ಕೆಲ ತಿಂಗಳ ಹಿಂದಷ್ಟೆ ಆಕೆ ಆತನ ಜೊತೆ ತೆರಳಿದ್ದಾಳೆ.

ಆದರೆ ಘಟನೆ ಹೊರಬಾರದ ಕಾರಣ ಗೌಪ್ಯವಾಗಿಯೇ ಇದ್ದು, ಇದೀಗ ಕೆಲ ದಿನಗಳ ಹಿಂದಷ್ಟೇ ಮಾಹಿತಿ ಹೊರಬಿದ್ದಿದೆ. ಈ ನಡುವೆ ಮುಂಬೈನಲ್ಲಿ ಇಕ್ಬಾಲ್ ಜೊತೆಗೆ ಆಕೆಯ ವಿವಾಹ ಕೂಡ ಆಗಿದ್ದು, ಸದ್ಯ ಆಕೆಯನ್ನ ಮಂಗಳೂರಿಗೆ ಕರೆ ತರಲಾಗಿದೆ ಎನ್ನಲಾಗಿದೆ.

ಆದರೆ ಇಕ್ಬಾಲ್ ಈ ಬಗ್ಗೆ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಇದೀಗ ಯುವತಿ ತಾನು ಹೆತ್ತವರ ಜೊತೆಗೆ ಇಚ್ಚೆಯನುಸಾರವೇ ಬಂದಿರೋದಾಗಿ ಅಫಿಡವಿತ್ ಸಲ್ಲಿಸಿದ್ದು, ಮಹಾರಾಷ್ಟ್ರ ಪೊಲೀಸ್ ಇಲಾಖೆಗೂ ತಲುಪಿಸಲಾಗಿದೆ ಎಂದು ತಿಳಿದು ಬಂದಿದೆ.

ಆದ್ರೆ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಬೃಹತ್ ಹೋರಾಟಕ್ಕೆ ವೇದಿಕೆ ಸಿದ್ದಪಡಿಸಿದ್ದು, ರಾಜ್ಯದ ಹಲವು ಲವ್ ಜಿಹಾದ್ ಪ್ರಕರಣಗಳ ವಿರುದ್ದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸದ್ಯ ಯುವತಿ ಎಲ್ಲಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಇಕ್ಬಾಲ್ ದೂರಿನಂತೆ ಮಹಾರಾಷ್ಟ್ರ ಪೊಲೀಸರು ಮಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.

click me!