
ಬೆಂಗಳೂರು(ಜ.11): ನರೇಂದ್ರ ಮೋದಿ ಸ್ವಾಮಿ ವಿವೇಕಾನಂದರ ಅಪರಾವತಾರನಾ..? ಮೋದಿಗೂ ವಿವೇಕಾನಂದರಿಗೂ ಸಾಮ್ಯತೆ ಇದೆಯಾ. ಸಾಮ್ಯತೆ ಇದೆ ಅನ್ನೋದಾದರೆ ಅದು ಏನು. ಈ ಕುರಿತು ಇದೀಗ ಕುತೂಹಲಕರ ವಿಷಯವೊಂದು ಹರಿದಾಡ್ತಿದೆ. ಅಷ್ಟಕ್ಕೂ ಯಾವುದು ಆ ವಿಷಯ..? ಅದನ್ನ ಬಹಿರಂಗ ಮಾಡಿದವರು ಯಾರು ..? ಇಲ್ಲಿದೆ ನೋಡಿ ಮಾಹಿತಿ..
ಹೌದು, ಭಾರತದಲ್ಲಿ ಹಲವು ಬದಲಾವಣೆಗಳಿಗೆ ಕಾರಣರಾದ ಪ್ರಧಾನಿ ಮೋದಿ ಇಂದು ಎಲ್ಲರ ಮನೆ ಮಾತಾಗಿದ್ದಾರೆ. ಕೆಲವರು ಪ್ರಧಾನಿ ಮೋದಿಯನ್ನ ಮನೆ ದೇವರಂತೆ ಪೂಜಿಸಿದರೆ, ಕೆಲವರು ಅಷ್ಟೇ ಪ್ರಮಾಣದಲ್ಲಿ ದ್ವೇಷ ಮಾಡುತ್ತಾರೆ. ಈ ಹಿಂದೆ ಕೆಲವರು ಪ್ರಧಾನಿ ಮೋದಿಯನ್ನ ವಿವೇಕಾನಂದರಿಗೆ ಹೋಲಿಸಿದ್ದರು. ಆದರೆ ಇದೀಗ ಮೋದಿಯ ಜನ್ಮ ಕುಂಡಲಿಗೂ ವಿವೇಕಾನಂದರ ಜನ್ಮಕುಂಡಲಿಗೂ ಹೋಲಿಕೆ ಇದೆ ಅಂತಾ ಗುಜರಾತ್ ಫಲಿತಾಂಶವನ್ನ ಭವಿಷ್ಯವನ್ನ ನಿಖರವಾಗಿ ಹೇಳಿ ಪ್ರಸಿದ್ದಿ ಪಡೆದಿದ್ದ ಪ್ರಕಾಶ್ ಅಮ್ಮಣ್ಣಾಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..
ಮೋದಿ ವಿವೇಕಾನಂದರ ಅಪರಾವತಾರ
‘ಪ್ರಧಾನಿ ನರೇಂದ್ರ ಮೋದಿ ಅವರ ಜಾತಕ ಪರಾಮರ್ಶೆ ಮಾಡುವಾಗ ಇವರಲ್ಲಿ ಸ್ವಾಮಿ ವಿವೇಕಾನಂದರ ಗುಣ- ಸ್ವಭಾವ- ಧೋರಣೆಗಳು ಕಂಡುಬಂದವು. ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ ಈ ನರೇಂದ್ರರಿಗೂ ಆ ನರೇಂದ್ರರಿಗೂ ಆತ್ಮ ಸಂಬಂಧವಿದೆ. ನರೇಂದ್ರ ಮೋದಿಯವರು ಮತ್ತು ವಿವೇಕಾನಂದರು ಇಬ್ಬರೂ ನರೇಂದ್ರರೆ. ಅಂದರೆ 'ನರಾಣಾಂ ಇಂದ್ರಃ' ಎನ್ನುವ ವಚನ ಪ್ರಕಾರ ಇಬ್ಬರೂ ನರೇಂದ್ರರಾಗುತ್ತಾರೆ. ಇದು ಕೇವಲ ಜನ್ಮ ಸಿದ್ಧಾಂತದ ಒಂದು ವಿವರಣೆ ಮತ್ತು ವಿಶ್ಲೇಷಣೆಯಾಗಿದೆ. ಅದೇನಿದ್ದರೂ ಇವರ ಜನ್ಮವು ಈ ದೇಶಕ್ಕೆ ವರವಂತೂ ಖಂಡಿತಾ ಹೌದು. ವಿವೇಕಾನಂದರನ್ನು ನಿಂದಿಸಿದ ಪೀಳಿಗೆಯು ಅವರ ನಂತರ ಈಗ ಹೊಗಳಿ ಅಟ್ಟಕ್ಕೇರಿಸುತ್ತಿದೆ. ಹಾಗೆಯೇ ಮೋದಿಯನ್ನು ವಿರೋಧಿಸಿದವರೂ ಮುಂದೊಂದು ದಿನ ಹೊಗಳುವ ಕಾಲವೂ ಇದೆ.’
ಇಷ್ಟೇ ಅಲ್ಲದೆ, ಮೋದಿ ಹಾಗೂ ವಿವೇಕಾನಂದ ಇಬ್ಬರ ದೇಹಕ್ಕೂ ಇರೋ ಸಾಮ್ಯತೆ ಬಗ್ಗೆಯೂ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ. ಇವರ ಪ್ರಕಾರ ಇಬ್ಬರ ದೇಹ ಭಾಷೆಯೂ ಒಂದೇ ಆಗಿದೆ. ವಿವೇಕಾನಂದರು ಮಹಾ ಜ್ಞಾನಿಗಳಾಗಿದ್ದರು. ನರೇಂದ್ರ ಮೋದಿಯವರಲ್ಲೂ ಅಪಾರ ದೇಶ ಪ್ರೇಮ, ಯೋಗ, ಧ್ಯಾನ ಇತ್ಯಾದಿಗಳನ್ನು ಕಾಣಬಹುದು. ಅಮೆರಿಕವೇ ಮೋದಿಯವರನ್ನು ಗೌರವಿಸಿತು, ಈ ಹಿಂದೆ ವಿವೇಕಾನಂದರು ಅಮೆರಿಕಕ್ಕೆ ಹೋಗುವಾಗ ಹೀನ ಸ್ಥಿತಿಯಲ್ಲಿ ಹೋದರು. ಬರುವಾಗ ಮಹಾ ಪುರುಷರಾಗಿ ಕಂಡರು. ಮೋದಿಗೆ ಬಹಿಷ್ಕಾರ ಹಾಕಿದ ಅಮೆರಿಕವೇ ನಂತರ ಪೀಠವಿಟ್ಟು ಸನ್ಮಾನಿಸಿದೆ. ವಿವೇಕಾನಂದರು ಅಪೂರ್ಣವಾಗಿ ಮಾಡಿದ್ದನ್ನು, ಮತ್ತೆ ನರೇಂದ್ರ ಮೋದಿಯವರಾಗಿ ಬಂದು ಪೂರ್ಣಗೊಳಿಸುವ ಪ್ರಯತ್ನಗಳು ಕಾಣುತ್ತಿವೆ ಅಂತೆಲ್ಲಾ ಹೇಳಿ ವಿವೇಕಾನಂದರ ಪುನರ್ಜನ್ಮವೇ ಪ್ರಧಾನಿ ಮೋದಿ ಎಂದು ಅಮ್ಣಣ್ಣಾಯ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.