
ಬೆಂಗಳೂರು: ‘ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಸಾಲ ಮನ್ನಾ ಮಾಡಿದ್ದೇನೆ. ಯಾರದೋ ಹೆದರಿಕೆಯಿಂದಲ್ಲ. ನನ್ನ ಬೆದರಿಕೆಗೆ ಜಗ್ಗಿ ಸಾಲ ಮನ್ನಾ ಮಾಡಿದ್ದಾರೆ ಎನ್ನುವ ಯಡಿಯೂರಪ್ಪನಂತವರನ್ನು ಸಾಕಷ್ಟು ಮಂದಿಯನ್ನು ನನ್ನ ರಾಜಕೀಯ ಜೀವನ ದಲ್ಲಿ ನೋಡಿದ್ದೇನೆ. ಇಂತಹವರಿಗೆಲ್ಲ ಹೆದರಿ ಸಾಲ ಮನ್ನಾ ಮಾಡಿಲ್ಲ.'
ಹೀಗಂತ ಠೇಂಕರಿಸಿದ್ದಾರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ. ನನ್ನ ಆಗ್ರಹಕ್ಕೆ ಬೆದರಿ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದಾರೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಯಾಗಿ ಠೇಂಕಾರ ಮಾಡಿದ ಸಿದ್ದರಾಮಯ್ಯ ಅವರು, ಕೆಲವರು ತಮ್ಮಷ್ಟಕ್ಕೆ ತಾವೇ ರೈತರ ಮಕ್ಕಳು, ಮಣ್ಣಿನ ಮಕ್ಕಳು ಎಂದು ಹೇಳಿ ಕೊಳ್ಳುತ್ತಾರೆ. ಈ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಯಾವತ್ತೂ ಹೊಲ ಉತ್ತಿಲ್ಲ, ಬೀಜ ಬಿತ್ತಿಲ್ಲ. ಸುಖಾಸುಮ್ಮನೆ ಬಿರುದು ಬಾವಲಿ ಇಟ್ಟುಕೊಳ್ಳುತ್ತಾರೆ. ಆದರೆ, ನಾನು ಚಿಕ್ಕ ವಯಸ್ಸಿನಲ್ಲಿ ನನ್ನ ಹಳ್ಳಿಯಲ್ಲಿ ಹೊಲ ಉತ್ತಿದ್ದೇನೆ, ದನ ಕಾಯ್ದಿದ್ದೇನೆ, ರೈತರ ಸಂಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಆದರೆ, ನನಗೆ ಇಂತಹ ಯಾವುದೇ ಬಿರುದು ಇಲ್ಲ. ಚಿಕ್ಕ ವಯಸ್ಸಿನಲ್ಲಿ ಕಂಡುಂಡಿದ್ದ ರೈತರು ಹಾಗೂ ಬಡವರ ನೋವುಗಳು ನನಗೆ ಜನಪರ ಕಾರ್ಯಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಿದೆ. ಇಂತಹ ಹಿನ್ನೆಲೆಯಲ್ಲೇ ಸಾಲಮನ್ನಾ ಮಾಡಿದ್ದೇನೆಯೇ ಹೊರತು ಯಾರಿಗೋ ಹೆದರಿಕೊಂಡು ಅಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ , ಸಚಿವ ಎಚ್.ಆಂಜನೇಯ, ನಾಯಕರಾದ, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ, ರಾಣಿ ಸತೀಶ್, ಶಾಸಕರಾದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ಸಂಸದ ಚಂದ್ರಪ್ಪ ಮೊದಲಾದವರು ಭಾಗವಹಿಸಿದ್ದರು.
ಮನಮೋಹನ್ರ ಶರ್ಟ್ ಕಾಲರ್ ಹಿಡಿದು ಬಿಎಸ್ವೈ ಸಾಲ ಮನ್ನಾ ಮಾಡಿಸಲಿ: ಸಿದ್ದು!
ಯಡಿಯೂರಪ್ಪ ವಿರುದ್ಧ ಕೆಂಡಕಾರುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮನಮೋಹನ್ ಸಿಂಗ್ ಅವರ ಶರ್ಟ್ ಕಾಲರ್ ಹಿಡಿದು ಯಡಿಯೂರಪ್ಪ ಸಾಲ ಮನ್ನಾ ಮಾಡಿಸಲಿ' ಎಂದು ಹೇಳಿದರು. ಸಾಲ ಮನ್ನಾ ಮಾಡುವಂತೆ ಸಿದ್ದರಾಮಯ್ಯ ಅವರ ಶರ್ಟ್ ಕಾಲರ್ ಹಿಡಿದು ಕೇಳ್ತೀನಿ ಅಂತ ಯಡಿಯೂರಪ್ಪ ಹೇಳುತ್ತಿದ್ದರು. ಈಗ ಮನಮೋಹನ್ ಸಿಂಗ್ರ ಶರ್ಟ್ ಕಾಲರ್ ಹಿಡಿದು ಕೇಳಲಿ ಎಂದರು. ಕೂಡಲೇ ಸಾವರಿಸಿಕೊಂಡು ಮೋದಿ ಶರ್ಟ್ ಕಾಲರ್ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.