ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಆರ್’ಎಸ್ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಒಳಹರಿವೂ ಕೂಡಾ ಹೆಚ್ಚಾಗಿದೆ.
ಅತ್ತ ಕೊಡಗು ಜಿಲ್ಲೆಯಾದ್ಯಾಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಇತ್ತ ಕೆಆರ್’ಎಸ್ ನೀರಿನ ಮಟ್ಟ ಹೆಚ್ಚಾಗಿದೆ. ಜಲಾಶಯದ ಮಟ್ಟ 124.80 ಅಡಿಯಾಗಿದ್ದು ನೀರಿನ ಮಟ್ಟ ಈಗಾಗಲೇ 90.80 ಅಡಿಯನ್ನು ಮುಟ್ಟಿದೆ.
ಗುರುವಾರ ಜಲಾಶಯಕ್ಕೆ ಒಳಹರಿವು ಪ್ರಮಾಣ 28383 ಕ್ಯುಸೆಕ್ ಇದ್ದರೆ, ಹೊರಹರಿವು 394 ಕ್ಯುಸೆಕ್ ಇದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 67.45 ಅಡಿಯಷ್ಟಿದ್ದರೆ, ಒಳ ಹರಿವು 601 ಕ್ಯುಸೆಕ್ ಆಗಿತ್ತು.
ಜೂನ್-ಜುಲೈಯಲ್ಲಿಯೂ ಈ ರೀತಿ ಮಳೆ ಸುರಿದರೆ ರಾಜ್ಯ ನೀರಿನ ಕೊರತೆ ಎದುರಿಸುವ ಸಾಧ್ಯತೆ ಕಡಿಮೆಯಾಗಲಿದೆ. ವಿಶೇಷವಾಗಿ, ಕೆಆರ್’ಎಸ್’ನಿಂದ ಕುಡಿಯುವ ನೀರು ಪಡೆಯುವ ಮೈಸೂರು, ಬೆಂಗಳೂರು ನಗರಗಳು ನೀರಿನ ಅಭಾವವನ್ನು ಎದುರಿಸಬೇಕಾಗಿಲ್ಲ.