ಜೀವಕ್ಕೆಲ್ಲಿದೆ ಧರ್ಮ ಭೇದ?: ಕೇರಳ ಮುಸ್ಲಿಮರಿಗೆ ನಮಾಜ್ ಮಾಡಲು ಜಾಗಕೊಟ್ಟ ದೇವಸ್ಥಾನ!

By Web DeskFirst Published Aug 23, 2018, 2:17 PM IST
Highlights

ಮಾನವೀಯ ಸಂಬಂಧಗಳನ್ನು ಬೆಸೆದ ಕೇರಳ ಪ್ರವಾಹ! ಮುಸ್ಲಿಮರಿಗೆ ನಮಾಜ್ ಮಾಡಲು ಜಾಗಕೊಟ್ಟ ದೇವಸ್ಥಾನ! ಹಿಂದೂ ಕುಟುಂಬಗಳಿಗೆ ಆಶ್ರಯವಾದ ಮಸೀದಿ! ಬಕ್ರೀದ್ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿದ ದೇವಸ್ಥಾನ  

ತ್ರಿಶೂರ್(ಆ.23): ಕೇರಳ ಪ್ರವಾಹ ನಿಜಕ್ಕೂ ಆಘಾತಕಾರಿ ಹೌದಾದರೂ, ಜಾತಿ ಧರ್ಮಗಳನ್ನು ಮೀರಿ ಮನುಷ್ಯರನ್ನು ಒಂದುಗೂಡಿಸುವಲ್ಲಿ ಪ್ರವಾಹ ಮಹತ್ವದ ಪಾತ್ರ ನಿರ್ವಹಿಸಿರುವುದು ಸುಳ್ಳಲ್ಲ.

ಕೇರಳ ಪ್ರವಾಹಕ್ಕೆ ಮಿಡಿದ ಮಾನವೀಯ ಹೃದಯಗಳು, ಜಾತಿ, ಧರ್ಮ ಇದ್ಯಾವುದನ್ನೂ ಲೆಕ್ಕಿಸದೇ ಪರಸ್ಪರರ ಸಹಾಯಕ್ಕೆ ಧಾವಿಸಿವೆ. ಇಂತಹ ಮಾನವೀಯ ಸಂಬಂಧಗಳ ನೂರಾರು ಉದಾಹರಣೆಗಳು ಕೇರಳ ಪ್ರವಾಹದಲ್ಲಿ ಕಂಡು ಬಂದಿವೆ.

ಅದರಂತೆ ಕೇರಳದ ತ್ರಿಶೂರ್ ಜಿಲ್ಲೆಯ ದೇವಸ್ಥಾನವೊಂದು ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ್ ಹಬ್ಬಕ್ಕೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಇಲ್ಲಿನ ಇರವರ್ತೂರು  ಬಳಿಯ ದೇವಸ್ಥಾನದಲ್ಲಿ ನೆರೆ ಸಂತ್ರಸ್ತರು ಆಶ್ರಯ ಪಡೆದಿದ್ದರು. ಇವರಲ್ಲಿ ಬಹುತೇಕರು ಮುಸ್ಲಿಮರೇ ಆಗಿದ್ದು, ನಿನ್ನೆಯ ಬಕ್ರೀದ್ ಹಬ್ಬಕ್ಕಾಗಿ ಪ್ರಾರ್ಥನೆ ಸಲ್ಲಿಸಲು ಇವರಿಗೆ ಅವಕಾಶ ಮಾಡಿಕೊಡಲಾಗಿದೆ.

ಇದೇ ವೇಳೆ ಮಲ್ಲಪುರಂ ಬಳಿ ಮಸೀದಿಯೊಂದು ಹಿಂದೂ ನೆರೆ ಸಂತ್ರಸ್ತರಿಗೆ ಆಶ್ರಯ ನೀಡಿದ್ದು, ಕೆಲವು ದಿನಗಳಿಂದ ಹಿಂದೂ ಕುಟುಂಬಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಿದೆ. ಇಲ್ಲಿ ಸುಮಾರು 17 ಹಿಂದೂ ಕುಟುಂಬಗಳು ಆಶ್ರಯ ಪಡೆದಿದ್ದು, ಇವರಿಗೆ ಈ ಮಸೀದಿಯೇ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದೆ.

ಈ ರೀತಿ ಪ್ರವಾಹದ ನಡುವೆಯೂ ಮಾನವೀಯ ಸಂಬಂಧಗಳ ಅನಾವರಣವಾಗುತ್ತಿದ್ದು, ಜೀವಕ್ಕೆ, ಬದುಕಿಗೆ ಹಿಂದೂ-ಮುಸ್ಲಿಂ ಎಂಬ ಅಂತರವಿಲ್ಲ ಎಂಬುದು ಸಾಬೀತಾಗಿದೆ.    

click me!