ಮಗಳು ಚಾಲಕನಿಗೆ ಹೊಡೆದಳು: ಅಪ್ಪ ಎಡಿಜಿಪಿ ಹುದ್ದೆ ಕಳೆದುಕೊಂಡರು
ಕಚೇರಿಯ ಚಾಲಕನಿಗೆ ಎಡಿಜಿಪಿ ಮಗಳಿಂದ ಥಳಿತ ಪ್ರಕರಣ
ಎಡಿಜಿಪಿ ವಜಾಗೊಳಿಸಿದ ಸಿಎಂ ಪಿಣರಾಯಿ ವಿಜಯನ್
ಎಡಿಜಿಪಿ ಸುದೇಶ್ ಕುಮಾರ್ ವಿರುದ್ದ ತನಿಖೆಗೆ ಆದೇಶ
ತಿರುವನಂತಪುರಂ(ಜೂ.16): ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಮಗಳು ಕಚೇರಿಯ ಚಾಲಕನ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸಿದ್ದ ಆರೋಪದ ಮೇರೆಗೆ ಎಡಿಜಿಪಿ ಸ್ಥಾನದಿಂದ ಸುದೇಶ್ ಕುಮಾರ್ ಅವರನ್ನು ವಜಾಗೊಳಿಸಲಾಗಿದೆ.
ಪೊಲೀಸ್ ಡ್ರೈವರ್ ಗಾವಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಹೆಂಡತಿ ಸಿಎಂ ಪಿಣರಾಯ್ ವಿಜಯನ್ ಅವರನ್ನು ನೇರವಾಗಿ ಭೇಟಿ ಮಾಡಿ ಅಧಿಕಾರಿಯ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ವರದಿ ತರಿಸಿಕೊಂಡಿದ್ದ ಸಿಎಂ ಪಿಣರಾಯಿ ವಿಜಯನ್, ದಕ್ಷಿಣ ವಲಯ ಎಡಿಜಿಪಿ ಅನಿಲ್ ಕುಮಾರ್ ಅವರಿಂದ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸುದೇಶ್ ಕುಮಾರ್ ವಿರುದ್ದ ಈ ಹಿಂದೆ ಪೊಲೀಸರನ್ನು ತಮ್ಮ ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದ ದೂರು ಕೂಡ ಕೇಳಿ ಬಂದಿತ್ತು. ಆದರೆ ಈ ಪ್ರಕರಣವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿರುವ ಸರ್ಕಾರ, ಸುದೇಶ್ ಕುಮಾರ್ ಅವರನ್ನು ಎಡಿಜಿಪಿ ಹುದ್ದೆಯಿಂದ ವಜಾಗೊಳಿಸಿದೆ. ಅವರಿಗೆ ಸರ್ಕಾರದ ಬೇರೆ ಇಲಾಖೆಯಲ್ಲಿ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಪೊಲೀಸ್ ಡ್ರೈವರ್ ನೀಡಿರುವ ದೂರಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಭರವಸೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಧು ಮೂಲಗಳು ತಿಳಿಸಿವೆ.