ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಷ್ಟ್ರ ರಾಜಕಾರಣದಲ್ಲಿ ಮಹಾಘಟಬಂಧನ್ ಸೇರಿ ಎಲ್ಲರನ್ನೂ ಒಗ್ಗೂಡಿಸುವ ಯತ್ನ ಮಾಡುತ್ತಿದ್ದಾರೆ. ಇತ್ತ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ನಾಯ್ಡು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಚಂದ್ರಬಾಬು ನಾಯ್ಡು ಅವರ ರಾಜಕೀಯ ದೇಶದಲ್ಲೇ ಅತ್ಯಂತ ಕೆಟ್ಟ ಕೊಳಕು ರಾಜಕಾರಣ ಎಂದು ಟೀಕೆ ಮಾಡಿದ್ದಾರೆ. ಚಂದ್ರಬಾಬು ಓರ್ವ ನಾಯಕನಲ್ಲ, ಅವರು ಕೇವಲ ನಿರ್ವಾಹಕನಷ್ಟೇ. ಅಷ್ಟೇ ಅಲ್ಲದೇ ನಾಯ್ಡು ದೊಡ್ಡ ಸುಳ್ಳುಗಾರ ಎಂದಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ಬಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಸಿಆರ್ ಆಂಧ್ರವನ್ನು ಸಂಪೂರ್ಣ ಭ್ರಷ್ಟಾಚಾರದಿಂದ ಮುಳುಗಿಸಿದ ವ್ಯಕ್ತಿ, ಅತ್ಯಂತ ಸ್ವಾರ್ಥಿ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಮುಂದಿನ ಚುನಾವಣೆ ವೇಳೆಗೆ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದಿದ್ದಾರೆ.
ಇನ್ನು ತೆಲಂಗಾಣದಲ್ಲಿ ಆರಂಭ ಮಾಡಿದ ಅನೇಕ ಯೋಜನೆಗಳನ್ನು ಕಾಪಿ ಮಾಡಿ ತಮ್ಮ ರಾಜ್ಯದಲ್ಲಿಯೂ ಅಳವಡಿಸಿಕೊಂಡಿದ್ದಾರೆ. ತಮ್ಮದೇ ಯೋಜನೆಗಳು ಎಂಬಂತೆ ಕೇಂದ್ರ ಸರ್ಕಾರದ ಬಳಿ ಬಿಂಬಿಸಿಕೊಂಡಿದ್ದಾರೆ. ಅವರಿಗೆ ಸರಿಯಾಗಿ ಇಂಗ್ಲೀಷ್ ಹಾಗೂ ಹಿಂದಿ ಮಾತನಾಡಲೂ ಸಾಧ್ಯವಿಲ್ಲ. ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ ಎಂದರು.
ಸದ್ಯNDA ತೊರೆದು UPA ಪಡೆ ಸೇರಿದ ಚಂದ್ರಬಾಬು ನಾಯ್ಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪಣತೊಟ್ಟಿದ್ದು, ವಿಪಕ್ಷಗಳನ್ನು ಒಂದೂಗೂಡಿಸುವ ಯತ್ನದಲ್ಲಿದ್ದಾರೆ. ಈ ಬಗ್ಗೆಯೂ ಪ್ರಸ್ತಾಪಿಸಿದ ಕೆಸಿಆರ್ ಗುಂಪು ಕಟ್ಟಿ ರಾಜಕಾರಣ ಮಾಡಲು ನಾಯ್ಡು ಹೊರಟಿದ್ದಾರೆ ಎಂದು ವಾಕ್ ಪ್ರಹಾರ ಮಾಡಿದ್ದಾರೆ.