
ಬೆಳಗಾವಿ (ನ. 24) : ರೂ.500,1000 ಮುಖ ಬೆಲೆಯ ನೋಟುಗಳ ಅಮಾನ್ಯ ನಿರ್ಧಾರದಿಂದ ಉದ್ಭವಿಸಿರುವ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ಸರ್ಕಾರ ಮತ್ತೆ ಪ್ರಧಾನಿ, ಕೇಂದ್ರ ಹಣಕಾಸು ಸಚಿವ ಮತ್ತು ಆರ್ಬಿಐಗೆ ಪತ್ರ ಬರೆಯಲು ನಿರ್ಧರಿಸಿದೆ.
ಬುಧವಾರ ಮೇಲ್ಮನೆಯಲ್ಲಿ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಮಂಡಿಸಿದ್ದ ನಿಲುವಳಿ ಸೂಚನೆ ಮೇಲಿನ ಚರ್ಚೆ ಬಳಿಕ ಸರ್ಕಾರದ ಪರ ಗೃಹಸಚಿವ ಡಾ.ಜಿ.ಪರಮೇಶ್ವರ ಉತ್ತರ ನೀಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ನಿಲುವು ಪ್ರಕಟಿಸಿದರು. ನ.8 ರಂದು ನೋಟುಗಳ ಅಮಾನ್ಯ ಮಾಡಿದ ಬಳಿಕ ರಾಜ್ಯದಲ್ಲಿ ಜನತೆ ಎದುರಿಸುತ್ತಿರುವ ಸಮಸ್ಯೆ ಕುರಿತು ಮುಖ್ಯಮಂತ್ರಿಗಳು ಈ ವರೆಗೆ ಮೂರು ಪತ್ರಗಳನ್ನು ಬರೆದು ಮನವರಿಕೆ ಮಾಡಿದ್ದರೂ ಈವರೆಗೆ ಪ್ರಧಾನಿ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಆರ್ಬಿಐ ಗವರ್ನರ್ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಈ ನೋಟಿನ ವಿಷಯ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ನಾವು ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಹಾಗಾಗಿ ಪತ್ರ ಬರೆದು ಅಳಲು ತೋಡಿಕೊಳ್ಳುವುದೊಂದೆ ಮಾರ್ಗ ಎಂದು ಡಾ.ಪರಮೇಶ್ವರ ವಿಷಾದಿಸಿದರು.
ಇದಕ್ಕೂ ಮೊದಲು ಕೆಲವು ನಿದರ್ಶನಗಳ ಮೂಲಕ ಸಮಸ್ಯೆಯನ್ನು ತೆರೆದಿಟ್ಟ ವಿ.ಎಸ್.ಉಗ್ರಪ್ಪ, ಪ್ರಧಾನಿ ಮೋದಿ ಅವರ ದಿಢೀರ್ ನಿರ್ಧಾರದಿಂದಾಗಿ ತಿರುವು-ಮುರುವಾಗಿದೆ ಎಂದು ಬಲವಾಗಿ ಖಂಡಿಸಿದರು.
ಉಭಯ ಸದನಗಳಲ್ಲೂ ನೋಟಿನ ಗದ್ದಲ: ಚಿಲ್ಲರೆ ಹಣಕ್ಕಾಗಿ ಬ್ಯಾಂಕ್ ಎದುರು ಕ್ಯೂ ನಿಂತು ಮೃತಪಟ್ಟ 74 ಮಂದಿ ಕುಟುಂಬಕ್ಕೆ ತಲಾ .1 ಕೋಟಿ ಪರಿಹಾರ ನೀಡಬೇಕು. ಹಣ ಪಡೆಯುವ ಮಿತಿ ಮುಕ್ತಗೊಳಿಸಿ ಸಹಕಾರಿ ಬ್ಯಾಂಕ್ಗಳ ಹಸ್ತಕ್ಷೇಪ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಆಗ್ರಹಿಸಿದರು.
ಮೇಲ್ಮನೆಯಲ್ಲಿ ನಿಮಯ 68ರಡಿ ನೋಟು ರದ್ದತಿ ವಿಚಾರದ ನಿಲುವಳಿ ಮಂಡಳಿಸಿದ ಜೆಡಿಎಸ್ನ ಬಸವರಾಜ ಹೊರಟ್ಟಿ, ನೋಟು ರದ್ದತಿಯಿಂದ ಜನತೆ ತತ್ತರಿಸಿದ್ದಾರೆ. ವ್ಯಾಪಾರ, ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೆ ಬಿಸಿ ತಟ್ಟಿದೆ. ಈ ಸಮಸ್ಯೆಗೆ ರಾಜ್ಯ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ: ನೋಟು ರದ್ದತಿ ವಿಚಾರದಲ್ಲಿ ಕೇಂದ್ರ ಸರ್ಕಾರ ದೊಡ್ಡ ತೀರ್ಮಾನ ಕೈಗೊಂಡಿದೆ ನಿಜ. ಆದರೆ, ರಾತ್ರೋರಾತ್ರಿ ನೋಟು ಅಮಾನ್ಯ ಮಾಡುವ ಮೂಲಕ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸಿನ ರಿಜ್ವಾನ್ ಅರ್ಷದ್ ಆರೋಪಿಸಿದರು.
ನೋಟೋ, ಲಾಟರಿ ಟಿಕೆಟೋ: ಸದನದಲ್ಲಿ .2000 ನೋಟು ಪ್ರದರ್ಶಿಸಿದ ಮೋಟಮ್ಮ, ಇದು ನೋಟೋ, ಲಾಟರಿ ಟಿಕೆಟೋ ಎನ್ನುವುದೇ ಗೊತ್ತಾಗುವುದಿಲ್ಲ. ಈ ನೋಟು ನೋಡಿದರೆ ದುಃಖ ಬರುತ್ತದೆ. ಮಕ್ಕಳ ಆಟಿಕೆ ವಸ್ತುವಿನಂತೆ ಕಾಣುತ್ತದೆ. ಇದು ಸರಿಯೇ ಎಂದರು.
ಸಹಕಾರಿ ಕ್ಷೇತ್ರದ ಬಗ್ಗೆ ತಾರತಮ್ಯ: ಕೇಂದ್ರ ಸರ್ಕಾರ ನೋಟು ಅಮಾನ್ಯಗೊಳಿಸಿರುವ ಐತಿಹಾಸ ನಿರ್ಣಯ ಕೈಗೊಂಡಿದೆ. ಆದರೆ, ಸಹಕಾರಿ ಸಂಸ್ಥೆಗಳನ್ನು ಅನುಮಾನದಿಂದ ನೋಡುವುದು ಸರಿಯಲ್ಲ. ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಬದಲಾಯಿಸುವುದಕ್ಕೆ ಮಾ.31ರ ವರೆಗೆ ಅವಧಿ ವಿಸ್ತರಿಸಬೇಕೆಂದು ಬಸವರಾಜ ಪಾಟೀಲ್ ಯತ್ನಾಳ ಆಗ್ರಹಿಸಿದರು.
ನೋಟು ರದ್ದತಿ ವಿಚಾರದಲ್ಲಿ ಕೇಂದ್ರ ಸರ್ಕಾರ ತುಘಲಕ್ ದರ್ಬಾರ್ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ ಎಂದು ಕಾಂಗ್ರೆಸಿನ ವಿ.ಎಸ್. ಉಗ್ರಪ್ಪ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕ್ಯಾಪ್ಟನ್ ಗಣೇಶ ಕಾರ್ಣಿಕ್, ಪ್ರಧಾನಿ ಬಗ್ಗೆ ಸದನದಲ್ಲಿ ಅವಹೇಳನಕಾರಿ ಹೇಳಿಕೆ ನೀಡುವ ಅಧಿಕಾರ ಸದಸ್ಯರಿಗೆ ಇಲ್ಲ ಎಂದು ಸದನದ ಗಮನ ಸೆಳೆದರು. ಸಭಾಪತಿ ಮರಿತಿಬ್ಬೇಗೌಡ ಅವರು, ಉಗ್ರಪ್ಪ ಅವರ ಭಸ್ಮಾಸೂರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.