ಬಲವಂತದ ಮದುವೆ : ಕರ್ನಾಟಕದ ಪ್ರಭಾವಿ ರಾಜಕಾರಣಿ ಪುತ್ರಿ ಸುಪ್ರೀಂಗೆ

By Suvarna Web DeskFirst Published Apr 12, 2018, 10:54 AM IST
Highlights

ತನ್ನ ಸಹಮತವಿಲ್ಲದೆ, ತಾನು ಪ್ರೀತಿಸಿದ ಯುವಕನ ಬದಲಿಗೆ, ಇತರ ವ್ಯಕ್ತಿಯೊಬ್ಬರ ಜತೆ ವಿವಾಹ ನೆರವೇರಿಸಿದ್ದಾರೆ ಎಂದು ತನ್ನ ಪೋಷಕರ ವಿರುದ್ಧವೇ ಕರ್ನಾಟಕದ ಕಲಬುರಗಿಯ ಮಹಿಳೆಯೊಬ್ಬರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ನವದೆಹಲಿ: ತನ್ನ ಸಹಮತವಿಲ್ಲದೆ, ತಾನು ಪ್ರೀತಿಸಿದ ಯುವಕನ ಬದಲಿಗೆ, ಇತರ ವ್ಯಕ್ತಿಯೊಬ್ಬರ ಜತೆ ವಿವಾಹ ನೆರವೇರಿಸಿದ್ದಾರೆ ಎಂದು ತನ್ನ ಪೋಷಕರ ವಿರುದ್ಧವೇ ಕರ್ನಾಟಕದ ಕಲಬುರಗಿಯ ಮಹಿಳೆಯೊಬ್ಬರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಈ ಬಗ್ಗೆ ಬುಧವಾರ ವಿಚಾರಣೆ ನಡೆಸಿದ ಸುಪ್ರೀಂ, ಈ ಪ್ರಕರಣವನ್ನು ಹೇಬಿಯಸ್ ಕಾರ್ಪಸ್ ಆಗಿ ಪರಿಗಣಿಸುತ್ತೇವೆ. ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಯಾವುದೇ ಸ್ಥಳಕ್ಕೆ ಕರೆದೊಯ್ಯದಂತೆ ರಕ್ಷಣೆ ನೀಡಲು ಸಿದ್ಧ ಎಂದು ಹೇಳಿ, ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿತು. ಜೊತೆಗೆ ಒಂದು ವೇಳೆ ಮದುವೆ ರದ್ದಾಗಬೇಕು ಎಂದಾದರೆ ಯುವತಿಯು, ಕಲಬುರಗಿಯ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾ. ಮಿಶ್ರಾ ಹೇಳಿದರು. ಆದರೆ ಅರ್ಜಿದಾರರು ಕೋರಿದಂತೆ ಹಿಂದೂ ವಿವಾಹ ಕಾಯ್ದೆಯ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತು. 

ಇದೇ ವೇಳೆ ದೂರು ಸಲ್ಲಿಕೆ ಮಾಡಿದ ಮಹಿಳೆ ಮತ್ತು ಆಕೆಯನ್ನು ಬಲವಂತದ ಮದುವೆಗೆ ದೂಡಿದ ಪೋಷಕರ ಹೆಸರುಗಳನ್ನು ಬಹಿರಂಗಪಡಿಸಬಾರದು ಎಂಬ ಸಂತ್ರಸ್ತೆ ಪರ ವಕೀಲೆ ಇಂದಿರಾ ಜೈಸಿಂಗ್ ಮಾಡಿದ ಮನವಿಯನ್ನು ಸುಪ್ರೀಂ ಪುರಸ್ಕರಿಸಿದೆ. ಆಗಿದ್ದೇನು?: ಕಲಬುರಗಿ ಮೂಲದ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರಿಯಾಗಿರುವ26 ವರ್ಷದ ಮಹಿಳಾ ಇಂಜಿನಿಯರ್ ಅವರ ವಿವಾಹವನ್ನು ಮಾ.14ರಂದು ಕಲಬುರಗಿ ಯಲ್ಲಿ ನೆರವೇರಿಸಲಾಗಿತ್ತು. ಆದರೆ, ತಾನು ಪ್ರೀತಿಸಿದ ಅನ್ಯ ಜಾತಿಯ ಯುವಕನೊಂದಿಗೆ ವಿವಾಹವಾಗಬೇಕೆಂದುಕೊಂಡಿದ್ದೆ.

ಆದರೆ, ಪೋಷಕರು ಬಲವಂತಪಡಿಸಿ, ‘ನನ್ನ ಆಸೆಗೆ ವಿರುದ್ಧವಾಗಿ ಬೇರೊಬ್ಬ ಯುವಕನೊಂದಿಗೆ ಮದುವೆಗೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ನನಗೆ ಬೆದರಿಸಿ, ಹಲ್ಲೆ ಮಾಡಿ. ಮಾನಸಿಕ ಹಿಂಸೆ ಸೇರಿದಂತೆ ಇತರ ಕಿರುಕುಳಗಳನ್ನು ನೀಡಿದ ನನ್ನ ಕುಟುಂಬಸ್ಥರು ಪ್ರೀತಿಸಿದ ಹುಡುಗನ ಬದಲಿಗೆ ಮತ್ತೋರ್ವ ಹುಡುಗನ ಜೊತೆ ವಿವಾಹ ಮಾಡಿಸಿದ್ದರು,’ ಎಂಬುದು ಯುವತಿಯ ಆರೋಪ.

ಅಲ್ಲದೆ, ಇದೇ ಕಾರಣಕ್ಕಾಗಿ ವಿವಾಹ ನೆರವೇರಿದ ಮೂರು ವಾರಗಳ ಬಳಿಕ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದು, ತನಗೆ ರಕ್ಷಣೆ ನೀಡುವಂತೆ ಕೋರಿ ಯುವತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಬರೆದಿದ್ದರು.

click me!