ಕರ್ನಾಟಕ-ಗೋವಾ ಹೆದ್ದಾರಿ ಬಂದ್‌

By Web DeskFirst Published Nov 19, 2018, 8:02 AM IST
Highlights

ಹೆದ್ದಾರಿ ಅಗಲೀಕರಣದ ನಿಮಿತ್ತ ಕರ್ನಾಟಕ-ಗೋವಾ ಸಂಪರ್ಕಿಸುವ ಅನಮೋಡ್‌ ಘಾಟ್‌ ರಸ್ತೆಯನ್ನು ಶೀಘ್ರ ಬಂದ್‌ ಮಾಡಲು ಕರ್ನಾಟಕ ನಿರ್ಧರಿಸಿದೆ.

ಪೋಂಡಾ[ನ.19]: ಹೆದ್ದಾರಿ ಅಗಲೀಕರಣದ ನಿಮಿತ್ತ ಕರ್ನಾಟಕ-ಗೋವಾ ಸಂಪರ್ಕಿಸುವ ಅನಮೋಡ್‌ ಘಾಟ್‌ ರಸ್ತೆಯನ್ನು ಶೀಘ್ರ ಬಂದ್‌ ಮಾಡಲು ಕರ್ನಾಟಕ ನಿರ್ಧರಿಸಿದೆ.

ಆದರೆ, ಕರ್ನಾಟಕದ ಈ ನಿರ್ಧಾರಕ್ಕೆ ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಕರ್ನಾಟಕದ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರ ಜತೆ ಸಭೆ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಾ ಲೋಕೋಪಯೋಗಿ ಸಚಿವ ಸುದಿನ್‌ ಧಾವಳೀಕರ್‌, ‘ಈ ಹೆದ್ದಾರಿಯನ್ನು ರಸ್ತೆ ಅಗಲೀಕರಣಕ್ಕೆ ಬಂದ್‌ ಮಾಡುವುದರಿಂದ ಗೋವಾ ಜನರಿಗೆ ಕರ್ನಾಟಕಕ್ಕೆ ಸಂಚರಿಸಲು ತೊಂದರೆಯಾಗುತ್ತದೆ. ಹೀಗಾಗಿ ಒಮ್ಮಿಂದೊಮ್ಮೆಲೇ ಇಡೀ ಹೆದ್ದಾರಿಯನ್ನು ಅಗಲೀಕರಣ ಮಾಡುವ ಬದಲು, ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಂಡು ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತವಾಗಿ ಇಡುವಂತೆ ಮನವಿ ಮಾಡಲಾಗುವುದು’ ಎಂದರು.

ಬೆಳಗಾವಿ ಹಾಗೂ ಗೋವಾವನ್ನು ಅನಮೋಡ್‌ ಘಾಟ್‌ ಹೆದ್ದಾರಿ ಸಂಪರ್ಕಿಸುತ್ತಿದ್ದು, 3 ಸಾವಿರ ಕೋಟಿ ರು. ವೆಚ್ಚದಲ್ಲಿ ಅಗಲೀಕರಣ ಕಾಮಗಾರಿ ನಡೆಯಲಿದೆ. ಈ ಕಾಮಗಾರಿ ಮುಗಿಯಲು 3 ವರ್ಷ ಹಿಡಯಲಿದೆ ಎಂದ ಅವರು, ಇದಕ್ಕೆ ಪರ್ಯಾಯ ಮಾರ್ಗಗಳು ರೂಪುಗೊಳ್ಳವುದು ಅಗತ್ಯವಿದೆ. ಪೋಂಡಾದಿಂದ ಬೆಳಗಾವಿಗೆ ತೆರಳುವ ಹಾಗೂ ಬೆಳಗಾವಿಯಿಂದ ಪೋಂಡಾಗೆ ಆಗಮಿಸುವ ಲಘು ವಾಹನಗಳನ್ನು ಚೋರ್ಲಾ ಘಾಟ್‌ ಮೂಲಕ ಮಾರ್ಗ ಬದಲಾವಣೆ ಮಾಡಬೇಕಾಗುತ್ತದೆ. ಇದಲ್ಲದೆ ಭಾರ ವಾಹನಗಳು ಕರ್ನಾಟಕಕ್ಕೆ ಕಾರವಾರ ಮೂಲಕ ಸಂಚರಿಸಬೇಕಾಗುತ್ತದೆ ಎಂದರು.

click me!