
ಮಹಾಸಮುಂದ್ (ಛತ್ತೀಸ್ಗಢ): ಛತ್ತೀಸ್ಗಢದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ, ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಕರ್ನಾ ಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ವಾಗುತ್ತಾ ಬಂದರೂ ಇನ್ನು ರೈತರ ಸಾಲ ಮನ್ನಾ ಆಗಿಲ್ಲ. ಹೀಗಿರುವಾಗ ಛತ್ತೀಸ್ಗಢ ರೈತರಿಗೇಕೆ ಸುಳ್ಳು ಭರವಸೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಚುನಾವಣೆ ಬಂತೆಂದರೆ ಕಾಂಗ್ರೆಸ್ ಭರವಸೆಯ ಆಟ ಆಡಲು ಶುರು ಮಾಡುತ್ತದೆ. ಆದರೆ ದೇಶದ ಜನರನ್ನು ಅವರು ಇನ್ನು ದಿಕ್ಕುತಪ್ಪಿಸಲಾಗದು. ಕಳೆದ 4 ತಲೆ ಮಾರುಗಳಿಂದ ದೇಶವನ್ನು ಆಳಿದವರು, ರೈತರ ಅಭ್ಯದಯಕ್ಕಾಗಿ ಏನು ಮಾಡಿದರು ಎಂಬ ಬಗ್ಗೆ ಉತ್ತರ ನೀಡಲೇಬೇಕು.
ಛತ್ತೀಸ್ಗಢದಲ್ಲಿ ಅವರು ರೈತರಿಗೆ ಸಾಲ ಮನ್ನಾದ ಭರವಸೆ ನೀಡುತ್ತಿದ್ದಾರೆ. ಕರ್ನಾಟಕ ಚುನಾವಣೆಯಲ್ಲೂ ಅವರು ಇದೇ ರೀತಿಯ ಭರವಸೆ ನೀಡಿದ್ದರು ಆದರೆ ಭರವಸೆ ನೀಡಿ ಒಂದು ವರ್ಷ ಆಗುತ್ತಾ ಬಂದರೂ, ಇನ್ನೂ ಭರವಸೆ ಈಡೇರಿಸಲಾಗಿಲ್ಲ. ಚುನಾವಣಾ ಭರವಸೆಯನ್ನು ಈಡೇರಿಸುವ ಬದಲು, ಸಾಲ ಬಾಕಿ ಉಳಿಸಿಕೊಂಡ ರೈತರ ವಿರುದ್ಧ ವಾರಂಟ್ ಹೊರಡಿಸುವ, ಅವರನ್ನು ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ಮೋದಿ ಕಿಡಿಕಾರಿದರು.
ಶನಿವಾರವಷ್ಟೇ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು. ವಿಜಯ್ ಮಲ್ಯ, ನೀರವ್ ಮೋದಿ, ಅನಿಲ್ ಅಂಬಾನಿ ಅಂಥವರಿಂದ ಹಣ ವಸೂಲಿ ಮಾಡಿ ರೈತರ ಸಾಲ ಮನ್ನಾಕ್ಕೆ ಹಣ ಹೊಂದಿಸಲಾಗುವುದು ಎಂದು ಭರವಸೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ