ಕರ್ನಾಟಕದಲ್ಲಿ ಅಸ್ಥಿತ್ವದಲ್ಲಿರುವ ಮೈತ್ರಿ ಸರ್ಕಾರದಿಂದ ಇದೀಗ ರೈತರ ಸಾಲಮನ್ನಾ ಭರವಸೆ ನೀಡಲಾಗಿದೆ. ಆದರೆ ಸಾಲ ಮನ್ನಾ ಆಗಿಲ್ಲ. ಮತ್ತೇಕೆ ಸುಳ್ಳು ಭರವಸೆ ನಿಡುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾಸಮುಂದ್ (ಛತ್ತೀಸ್ಗಢ): ಛತ್ತೀಸ್ಗಢದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ, ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಕರ್ನಾ ಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ವಾಗುತ್ತಾ ಬಂದರೂ ಇನ್ನು ರೈತರ ಸಾಲ ಮನ್ನಾ ಆಗಿಲ್ಲ. ಹೀಗಿರುವಾಗ ಛತ್ತೀಸ್ಗಢ ರೈತರಿಗೇಕೆ ಸುಳ್ಳು ಭರವಸೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಚುನಾವಣೆ ಬಂತೆಂದರೆ ಕಾಂಗ್ರೆಸ್ ಭರವಸೆಯ ಆಟ ಆಡಲು ಶುರು ಮಾಡುತ್ತದೆ. ಆದರೆ ದೇಶದ ಜನರನ್ನು ಅವರು ಇನ್ನು ದಿಕ್ಕುತಪ್ಪಿಸಲಾಗದು. ಕಳೆದ 4 ತಲೆ ಮಾರುಗಳಿಂದ ದೇಶವನ್ನು ಆಳಿದವರು, ರೈತರ ಅಭ್ಯದಯಕ್ಕಾಗಿ ಏನು ಮಾಡಿದರು ಎಂಬ ಬಗ್ಗೆ ಉತ್ತರ ನೀಡಲೇಬೇಕು.
ಛತ್ತೀಸ್ಗಢದಲ್ಲಿ ಅವರು ರೈತರಿಗೆ ಸಾಲ ಮನ್ನಾದ ಭರವಸೆ ನೀಡುತ್ತಿದ್ದಾರೆ. ಕರ್ನಾಟಕ ಚುನಾವಣೆಯಲ್ಲೂ ಅವರು ಇದೇ ರೀತಿಯ ಭರವಸೆ ನೀಡಿದ್ದರು ಆದರೆ ಭರವಸೆ ನೀಡಿ ಒಂದು ವರ್ಷ ಆಗುತ್ತಾ ಬಂದರೂ, ಇನ್ನೂ ಭರವಸೆ ಈಡೇರಿಸಲಾಗಿಲ್ಲ. ಚುನಾವಣಾ ಭರವಸೆಯನ್ನು ಈಡೇರಿಸುವ ಬದಲು, ಸಾಲ ಬಾಕಿ ಉಳಿಸಿಕೊಂಡ ರೈತರ ವಿರುದ್ಧ ವಾರಂಟ್ ಹೊರಡಿಸುವ, ಅವರನ್ನು ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ಮೋದಿ ಕಿಡಿಕಾರಿದರು.
ಶನಿವಾರವಷ್ಟೇ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು. ವಿಜಯ್ ಮಲ್ಯ, ನೀರವ್ ಮೋದಿ, ಅನಿಲ್ ಅಂಬಾನಿ ಅಂಥವರಿಂದ ಹಣ ವಸೂಲಿ ಮಾಡಿ ರೈತರ ಸಾಲ ಮನ್ನಾಕ್ಕೆ ಹಣ ಹೊಂದಿಸಲಾಗುವುದು ಎಂದು ಭರವಸೆ ನೀಡಿದ್ದರು.