
ಬೆಂಗಳೂರು[ಸೆ.22]: ಅನರ್ಹ ಶಾಸಕರ ತ್ಯಾಗಕ್ಕೆ ಅನ್ಯಾಯವಾಗದ ರೀತಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಉಪ ಚುನಾವಣೆಯಲ್ಲಿ ನಾವು 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿ ಚುನಾವಣೆ ಎದುರಿಸುತ್ತೇವೆ ಎಂದರು.
ಚುನಾವಣೆಗಳು ಬಂದಾಗ ಈ ರೀತಿ ಕೆಲ ಗೊಂದಲಗಳು ಆಗೋದು ಸಾಮಾನ್ಯವಾಗಿದೆ. ಅವುಗಳನ್ನು ಸರಿ ಮಾಡಿಕೊಂಡು ಚುನಾವಣೆಗೆ ಪೂರ್ಣ ಸಿದ್ಧತೆ ಮಾಡುತ್ತಿದ್ದೇವೆ. ಸವಾಲುಗಳಿಲ್ಲದಿದ್ದರೆ ರಾಜಕಾರಣವೇ ಅಲ್ಲ. ನಾವು 15 ಕ್ಷೇತ್ರಗಳಲ್ಲಿ ಕೂಡಾ ಜಯ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ಪಕ್ಷಕ್ಕೆ ವಾತಾವರಣ ಅದ್ಭುತವಾಗಿದೆ. ಖಂಡಿತ 15 ಸ್ಥಾನ ಗೆಲ್ಲುತ್ತಿವೆ. ಅನರ್ಹ ಶಾಸಕರ ತ್ಯಾಗಕ್ಕೆ ಅನ್ಯಾಯ ಆಗದ ರೀತಿ ನೋಡಿಕೊಳ್ಳುವ ಜವಾಬ್ಬಾರಿ ನಮ್ಮದು. ನಾವೆಲ್ಲಾ ಪ್ರಮುಖರು ಸೇರಿ ಕುಳಿತು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಕಟೀಲ್ ಹೇಳಿದರು.
ರಾಜ್ಯ ನಾಯಕರ ಒಮ್ಮತದ ಬಳಿಕ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಸಮಿತಿಗೆ ಕಳಿಸುತ್ತೇವೆ. ಬಳಿಕ ಹುರಿಯಾಳುಗಳ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.