ರಾಜ್ಯಪಾಲರ ಡಬಲ್ ಡೆಡ್ ಲೈನ್ ಮುಗಿದಿದೆ. ಆದರೆ ದೋಸ್ತಿ ಸರ್ಕಾರ ವಿಶ್ವಾಸ ಮತ ಸಾಬೀತು ಮಾಡಿಲ್ಲ. ಇದೀಗ ಸೋಮವಾರ ಅಂದರೆ ಜುಲೈ 22ಕ್ಕೆ ಕಲಾಪ ಮುಂದೂಡಿದ ಸ್ಪೀಕರ್ ತಮ್ಮ ಕುರ್ಚಿಯಿಂದ ಎದ್ದು ಹೋಗಿದ್ದಾರೆ.
ಬೆಂಗಳೂರು[ಜು. 19] ಕರ್ನಾಟಕದ ರಾಜಕೀಯ ಗೊಂದಲಗಳು ಇಂದು ಕೊನೆಯಾಗಬಹುದು, ನಾಳೆ ಕೊನೆಯಾಗಬಹುದು ಎಂದುಕೊಳ್ಳುತ್ತಿರುವವರು ಇನ್ನು ಮೂರು ದಿನ ಕಾಯಬೇಕಾಗಿದೆ. ಶುಕ್ರವಾರದ ಕಲಾಪವೂ ಗೊಂದಲಗಳ ನಡುವೆಯೇ ಅಂತ್ಯವಾಗಿದೆ.
ಬೆಳಗ್ಗೆಯಿಂದಲೂ ಆರಂಭವಾದ ಚರ್ಚೆ ರಾತ್ರಿ 8.30ರವರೆಗೆ ನಡೆಯಿತು. ವಿರೋಧ ಪಕ್ಷ ಬಿಜೆಪಿಯವರು ತಾಳ್ಮೆಯಿಂದ ಕುಳಿತುಕೊಂಡಿದ್ದರೆ ಆಡಳಿತ ಪಕ್ಷದ ಶಾಸಕರು ಒಬ್ಬರಾದ ಮೇಲೆ ಒಬ್ಬರು ಸುದೀರ್ಘ ಭಾಷಣ ಮಾಡಿದರು.
ಕೇಂದ್ರಕ್ಕೆ ರಾಜ್ಯಪಾಲರ ವರದಿ, ರಾಷ್ಟ್ರಪತಿ ಆಳ್ವಿಕೆ ಜಾರಿ?
ಇತಿಹಾಸ, ತಾವು ಆಯ್ಕೆಯಾದ ಕ್ಷೇತ್ರ, ರಾಜ್ಯದ ಜನರು ಏನು ಅಂದುಕೊಳ್ಳುತ್ತಿದ್ದಾರೆ ಎಂಬೆಲ್ಲ ವಿಚಾರಗಳ ಮೇಲೆ ಒಬ್ಬರಾದ ಮೇಲೆ ಒಬ್ಬರು ಮ್ಯಾರಥಾನ್ ಭಾಷಣ ಮಾಡಿದರು. ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಮ್ಮೀ ಹೆಬ್ಬಾಳ್ಕರ್, ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಉದ್ದುದ್ದ ಭಾಷಣ ಮಾಡಿ ಅಭಿಪ್ರಾಯ ಹೊರಹಾಕಿದರು.