ಕನ್ನಡಪ್ರಭ ಸುವರ್ಣ ಸಂಭ್ರಮಕ್ಕೆ ಮುಖ್ಯಮಂತ್ರಿ ಶುಭಾಶಯ

By Suvarna Web DeskFirst Published Jan 18, 2018, 8:18 AM IST
Highlights

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಅಭಿವೃದ್ಧಿಯ ಜೀವನಾಡಿ. ಸರ್ಕಾರ ಮತ್ತು ಜನತೆಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಮಾಧ್ಯಮಗಳ ಕರ್ತವ್ಯ ಮತ್ತು ಜವಾಬ್ದಾರಿ.

ಕನ್ನಡಿಗರ ಜನಪ್ರಿಯ ಪತ್ರಿಕೆಗಳಲ್ಲೊಂದಾದ ‘ಕನ್ನಡಪ್ರಭ’ ಕನ್ನಡ ದಿನಪತ್ರಿಕೆಯು ತನ್ನ ಅರ್ಥಪೂರ್ಣ ಅಸ್ತಿತ್ವದ ಐವತ್ತು ವರ್ಷಗಳನ್ನು ಪೂರ್ಣಗೊಳಿಸಿ ಸುವರ್ಣ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ ಎಂಬುದು ಅತ್ಯಂತ ಸಂತಸದ ಸಂಗತಿಯಾಗಿದೆ.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಅಭಿವೃದ್ಧಿಯ ಜೀವನಾಡಿ. ಸರ್ಕಾರ ಮತ್ತು ಜನತೆಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಮಾಧ್ಯಮಗಳ ಕರ್ತವ್ಯ ಮತ್ತು ಜವಾಬ್ದಾರಿ. ಈ ದಿಸೆಯಲ್ಲಿ ಕನ್ನಡಪ್ರಭ ದಿನಪತ್ರಿಕೆಯು ಐವತ್ತು ವರ್ಷಗಳ ತನ್ನ ಅಸ್ತಿತ್ವದ ಸುದೀರ್ಘ ಅವಧಿಯಲ್ಲಿ ಜನಸಾಮಾನ್ಯರ ಧ್ವನಿಯಾಗಿ ಹಾಗೂ ಜನತೆಯ ರಾಯಭಾರಿಯಾಗಿ ಯಶಸ್ವಿ ಯಾಗಿ ಕಾರ್ಯನಿರ್ವಹಿಸಿದೆ.

ಕನ್ನಡಪ್ರಭ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಎನ್.ಎಸ್. ಸೀತಾರಾಮ ಶಾಸ್ತ್ರಿ ಅವರ ಬುನಾದಿ, ಕೆ.ಎಸ್. ರಾಮಕೃಷ್ಣಮೂರ್ತಿ ಅವರ ಮಾರ್ಗದರ್ಶನ, ಖಾದ್ರಿ ಶಾಮಣ್ಣ ಅವರ ದಿಟ್ಟ ಸಂಪಾದಕೀಯ, ವೈಎನ್‌ಕೆ ಎಂದೇ ಹೆಸರಾಗಿದ್ದ ವೈ.ಎನ್.ಕೃಷ್ಣಮೂರ್ತಿ ಅವರ ಹೊಸ ಆವಿಷ್ಕಾರಗಳು, ಕೆ.ಸತ್ಯನಾರಾಯಣ ಅವರ ಅಗ್ರ ಲೇಖನಗಳು ಕನ್ನಡಪ್ರಭ ಪತ್ರಿಕೆಯನ್ನು ಬೆಳೆಸಿದ್ದು ಹಾಗೂ ಬೆಳಗಿಸಿದ್ದು ಇದೀಗ ಇತಿಹಾಸ.

ರಾಜ್ಯದ ನೆಲ-ಜಲದ ಹಿತರಕ್ಷಣೆ ಹಾಗೂ ನುಡಿ-ಗಡಿಯ ಹಿತ ಚಿಂತನೆ ಮಾಡುವ ಸದಾ ಕನ್ನಡ ಪರ ನಿಲುವು ಮತ್ತು ಧೋರಣೆ ಹೊತ್ತ ಕನ್ನಡಪ್ರಭ ಪತ್ರಿಕೆಯು ನಿಖರ ಮಾಹಿತಿ ಒದಗಿಸುವಲ್ಲಿ, ವಿಶೇಷ ಮನರಂಜನೆ ನೀಡುವಲ್ಲಿ, ಕಥೆ-ಕವನ-ಕಾದಂಬರಿಗಳಿಗೆ ತುಂಬು ಪ್ರೋತ್ಸಾಹ ಕೊಡುವಲ್ಲಿ, ಕನ್ನಡಪರ ಚಳುವಳಿ ಹಾಗೂ ರೈತ ಪರ ಹೋರಾಟಗಳಿಗೆ ಕಳಕಳಿ ಮತ್ತು ಕಾಳಜಿ ತೋರುವಲ್ಲಿ, ಕನ್ನಡಿಗರ ಮನ ಮತ್ತು ಮನೆಗಳನ್ನು ತಲುಪುವಲ್ಲಿ ಎಲ್ಲರ ಗಮನ ಸೆಳೆದಿದೆ.

ಸುವರ್ಣ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಕನ್ನಡಪ್ರಭ ಪತ್ರಿಕೆಯು ಮತ್ತಷ್ಟು ಹೊಸತನದೊಂದಿಗೆ ಶತಮಾನ ಸಂಭ್ರಮದತ್ತ ಮುನ್ನಡೆಯಲಿ ಎಂಬುದೇ ನನ್ನ ಮನದಾಳದ ಹಾರೈಕೆ.

- ಸಿದ್ದರಾಮಯ್ಯ,ಮುಖ್ಯಮಂತ್ರಿ

click me!