ದಕ್ಷಿಣ ಭಾರತದಲ್ಲಿ ಬಿಜೆಪಿ ತೆರೆದ ಹೆಬ್ಬಾಗಿಲು ಮುಚ್ಚಿಸುತ್ತೇವೆ : ದೇವೇಗೌಡ

By Web DeskFirst Published Oct 24, 2018, 9:31 AM IST
Highlights

ದಕ್ಷಿಣ ಭಾರತದಲ್ಲಿ ಬಿಜೆಪಿ ತೆರೆದ ಹೆಬ್ಬಾಗಿಲು ಮುಚ್ಚಬೇಕು: ಎಚ್‌ಡಿಡಿ | ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮೈತ್ರಿ ಅನಿವಾರ್ಯ ಎಂದ ಮಾಜಿ ಪಿಎಂ

 ಶಿವಮೊಗ್ಗ (ಅ. 24):  ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ತೆರೆದಿರುವ ಹೆಬ್ಬಾಗಿಲನ್ನು ಮುಚ್ಚಿಸಬೇಕಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಪ್ರಧಾನಿ ಮೋದಿ ಆಡಳಿತ ನೋಡುತ್ತಿದ್ದೇವೆ. ಅನೇಕ ರಾಜ್ಯಗಳಲ್ಲಿ ಸದ್ಯದ ಸ್ಥಿತಿ ತೀರಾ ಹದಗೆಟ್ಟಿದೆ. ಇದನ್ನು ವಿಮರ್ಶೆ ಮಾಡಬೇಕು. ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ತೆರೆದ ಹೆಬ್ಬಾಗಿಲನ್ನು ಮುಚ್ಚಿಸಬೇಕು ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ದಿಕ್ಸೂಚಿ:

ರಾಜ್ಯದ ಈ ಉಪ ಚುನಾವಣೆ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ. ದೇಶದ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಮೈತ್ರಿ ಅನಿವಾರ್ಯ. ಮುಂದೆ ದೇಶದಲ್ಲಿ ಸಂಭವಿಸಬಹುದಾದ ಅನಾಹುತಗಳಿಗೆ ಅವಕಾಶ ಮಾಡಿಕೊಡದಂತೆ ಬಿಜೆಪಿಯೇತರ ಪಕ್ಷಗಳು ಒಂದಾಗಿ ಹೋರಾಟ ನಡೆಸಬೇಕಿದೆ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅನೇಕ ಪಕ್ಷಗಳ ನಾಯಕರು ಮೈತ್ರಿಕೂಟ ಸರ್ಕಾರಕ್ಕೆ ಬೆಂಬಲ ಸೂಚಿಸಲು ಬಂದಿದ್ದರು.

2019ರ ಚುನಾವಣೆಯಲ್ಲಿ ದೇಶದಲ್ಲಿ ಒಂದು ವ್ಯವಸ್ಥೆ ಉಳಿದುಕೊಳ್ಳಲು ಮೈತ್ರಿಕೂಟದ ಅಗತ್ಯವಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಆರಂಭವಾಗಿದೆ. ಆದರೆ ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿ ಮಾಯಾವತಿಯ ನಿಲುವನ್ನೇ ಮುಂದಿಟ್ಟುಕೊಂಡು ಮೈತ್ರಿಕೂಟ ಒಡೆದೇ ಹೋಗಿದೆ ಎಂದು ಬಿಂಬಿಸುತ್ತಿದ್ದಾರೆ. ವಾಸ್ತವವಾಗಿ ಹಾಗಾಗಿಲ್ಲ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯೊಂದಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, 5 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಸ್ಪಷ್ಟಸಂದೇಶ ರವಾನಿಸಬೇಕು ಎಂದರು. 

click me!