‘ಬಿಜೆಪಿ ಮೆಚ್ಚಿಸಲು ರಾಜೀನಾಮೆ ಹೇಳಿಕೆ ನೀಡಿದ ಸುಮಲತಾ’

By Web DeskFirst Published Jun 10, 2019, 11:14 AM IST
Highlights

ಬಿಜೆಪಿ ನಾಯಕರ ಮೆಚ್ಚಿಸುವ ಸಲುವಾಗಿ ಪಕ್ಷೇತರ ಸಂಸದೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕರೋರ್ವರು ಹೇಳಿದ್ದಾರೆ. 

ಬೆಂಗಳೂರು :  ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಷ್‌ ಅವರು ಬಿಜೆಪಿಯನ್ನು ಮೆಚ್ಚಿಸಲು ಅಥವಾ ರಾಜಕೀಯ ನೆಲೆಗಾಗಿ ಪರಿತಪಿಸುತ್ತಿರುವ ಕೆಲವು ನಾಯಕರನ್ನು ಖುಷಿಪಡಿಸಲು ನಮ್ಮ ಪಕ್ಷ ಇಲ್ಲವೇ ನಮ್ಮ ನಾಯಕರನ್ನು ಟೀಕಿಸುವ ಪ್ರಯತ್ನ ಮಾಡಿದರೆ ಅದನ್ನು ಬಯಲು ಮಾಡುವ ಮತ್ತು ರಾಜಕೀಯವಾಗಿ ಉತ್ತರಿಸುವ ಶಕ್ತಿ ಪಕ್ಷ ಹಾಗೂ ಕಾರ್ಯಕರ್ತರಿಗೆ ಇದೆ ಎಂದು ಜೆಡಿಎಸ್‌ ರಾಜ್ಯ ವಕ್ತಾರ ರಮೇಶ್‌ ಬಾಬು ಪ್ರತಿಕ್ರಿಯಿಸಿದ್ದಾರೆ. 

ಜನತಂತ್ರದಲ್ಲಿ ಒಬ್ಬ ಚುನಾಯಿತ ಪ್ರತಿನಿಧಿ ತನ್ನ ಮತದಾರರೊಂದಿಗೆ ಅನೇಕ ರೀತಿಯ ಸಂವಾದ ಮಾಡುತ್ತಾನೆ. ಹೀಗಿರುವಾಗ ಮದ್ದೂರು ಕ್ಷೇತ್ರದ ಶಾಸಕರಾದ ಡಿ.ಸಿ. ತಮ್ಮಣ್ಣ ಅವರು ತಮ್ಮ ಕ್ಷೇತ್ರದ ಜನರೊಂದಿಗೆ ಹಂಚಿಕೊಂಡ ಭಾವನೆಗಳಿಗೆ ಸಂಸದೆ ಸುಮಲತಾ ಅವರು ದರ್ಪದ ಟೀಕೆ ಮಾಡುವುದರ ಜೊತೆಗೆ ರಾಜೀನಾಮೆ ನೀಡಲು ಕೇಳಿದ್ದಾರೆ. ಮಂಡ್ಯದ ಸಂಸದರಾಗಿ ಆಯ್ಕೆ ಆದ ಎರಡೇ ವಾರದಲ್ಲಿ ತಮ್ಮ ಆದ್ಯತೆಗಳನ್ನು ಬದಲಾಯಿಸಿ ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ಮುಂದಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಸೋಲನ್ನು ನಾವು ಗೌರವದಿಂದ ಒಪ್ಪಿಕೊಂಡಿದ್ದೇವೆ. ಅದೇ ಸಮಯದಲ್ಲಿ ನಮ್ಮ ಪಕ್ಷದ ಶಾಸಕರ ಜವಾಬ್ದಾರಿಯೂ ಗೊತ್ತಿದೆ. ರಾಜಕಾರಣ ನಮಗೆ ಫ್ಯಾಷನ್‌ ಅಲ್ಲ. ಸಂವಾದದ ಮೂಲಕ ಜನರ ನಾಡಿ ಮಿಡಿತ ಅರಿಯುವುದು ಶಾಸಕರ ಕೆಲಸ. ಅದಕ್ಕೆ ಯಾರ ಅಪ್ಪಣೆಯೂ ಅನುಮೋದನೆಯೂ ಬೇಕಿಲ್ಲ. 

ಸಂಸದೆ ಸುಮಲತಾ ಅವರು ಒಬ್ಬ ಸಂಸದೆಯಾಗಿ ಸರ್ಕಾರಗಳ ಸಹಕಾರ ಪಡೆದು ಮಂಡ್ಯ ಜನರ ಸ್ವಾಭಿಮಾನಕ್ಕೆ ಪೂರಕವಾಗಿ ಅಭಿವೃದ್ಧಿಯ ಕೆಲಸ ಮಾಡಲಿ. ಒಂದು ರಾಜಕೀಯ ಪಕ್ಷವಾಗಿ ನಮ್ಮ ಸಹಕಾರವಿರುತ್ತದೆ ಎಂದು ಅವರು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

click me!