
ಬೆಂಗಳೂರು : ‘ಯಾರು ಏನೇನು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ನಮಗೆ ಅವರ ಸರ್ಟಿಫಿಕೆಟ್ ಬೇಕಾಗಿಲ್ಲ..!’ ಇದು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ವೇಳೆ ತಮ್ಮ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪನವರಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶನಿವಾರ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ನೀಡಿದ ತಣ್ಣನೆಯ ಮಾತಿನೇಟು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮಹಾನ್ ನಾಯಕರು (ಬಿ.ಎಸ್.ಯಡಿಯೂರಪ್ಪ) ಸದನದಲ್ಲಿ ವೀರಾವೇಶದಿಂದ ಮಾತನಾಡಿದ್ದನ್ನು ನೋಡಿದ್ದೇನೆ. ನಾವು ಜನತೆಯ ಆಶೀರ್ವಾದದಿಂದ 37 ಸ್ಥಾನ ಗೆದ್ದಿದ್ದೇವೆ ಎಂದು ಕಿಡಿಕಾರಿದರು.
ಸದನದಲ್ಲಿ ಅಪ್ಪ ಮಕ್ಕಳು ದಗಲ್ಬಾಜಿಗಳು ಅಂತಾ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳ್ತಾ ಇದ್ರು. ಈಗ ಅವರಿಗೆ ಉತ್ತರ ಕೊಡೊದಿಲ್ಲ. ಆ ಕುರಿತು ಮಾತನಾಡಲು ಕಾಲ ಬಹಳ ಹತ್ತಿರವಿದೆ. ಯಾರಾರಯರು ಯಾರಿಗೆಲ್ಲ ಏನೇನು ಮೋಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಯಡಿಯೂರಪ್ಪ ಅವರ ಹೆಸರು ಹೇಳದೆ ಅವರ ಮಾತಿನ ಶೈಲಿಯನ್ನು ಅನುಕರಿಸಿ ಅಣಕವಾಡಿದರು.
ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಕ್ಕೆ ನಾನು ಅವರಿಗೆ ಅಭಾರಿಯಾಗಿದ್ದೇನೆ. ಇದಕ್ಕೆ ಉತ್ತರ ಕೊಡೋದು ಜನರು. ಹಾಗಾಗಿ ಆ ಮಹಾನ್ ನಾಯಕರಿಂದ ನಮಗೆ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ಜೆಡಿಎಸ್ ವರಿಷ್ಠರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಸಂಖ್ಯಾತರಿಗೆ ಜೆಡಿಎಸ್ ಪಕ್ಷಕ್ಕೆ ಮತ ಚಲಾಯಿಸಿದರೆ ಬಿಜೆಪಿಗೆ ಹೋಗುತ್ತದೆ ಎಂದು ಕೆಲವರು ಹೇಳಿದ್ದರು. ಈಗಲಾದರೂ ಜೆಡಿಎಸ್ನ ಬದ್ಧತೆಯನ್ನು ಆ ಸಮುದಾಯವು ಅರ್ಥ ಮಾಡಿಕೊಳ್ಳಬೇಕಿದೆ. ರಾಜಕೀಯದಲ್ಲಿ ಮುಸಲ್ಮಾನರಿಗೆ ಯಾರು ಮೀಸಲಾತಿ ಸೌಲಭ್ಯ ಕೊಟ್ಟರು ಎಂಬುದನ್ನು ಅರಿತುಕೊಳ್ಳಬೇಕು. ಅವರಿಗೆ ಮೀಸಲಾತಿ ಕೊಟ್ಟಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ಎಂದು ದೇವೇಗೌಡರು ಖಾರವಾಗಿ ಪ್ರಶ್ನಿಸಿದರು.
ಮುಸ್ಲಿಮರಿಗೆ ಬೆಂಗಳೂರು ಮೇಯರ್ ಸ್ಥಾನವನ್ನು ಕಲ್ಪಿಸಿದ್ದು ನಾವು. ರಾಜಕೀಯವಾಗಿ ಶಕ್ತಿ ತುಂಬಿದ್ದೇವೆ. ಪ್ರತಿಯೊಂದು ಹಂತದಲ್ಲೂ ಅಲ್ಪಸಂಖ್ಯಾತರ ರಕ್ಷಣೆಗೆ ಪಕ್ಷ ಹೋರಾಟ ನಡೆಸಿದೆ. ಆದರೆ ರಾಮನಗರ ಕ್ಷೇತ್ರದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆ ವರ್ಗದ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ ಎಂದು ಗೌಡರು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.