ದರ್ಶನ್‌, ಯಶ್‌ ಸಿನಿಮಾ ಹಾಡಿಗೂ ಜೆಡಿಎಸ್‌ ಬ್ಯಾನ್‌!

By Web DeskFirst Published Jul 28, 2019, 8:33 AM IST
Highlights

ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ವಿರುದ್ಧ ಕಣಕ್ಕೆ ಇಳಿದಿದ್ದ ಯಶ್ ದರ್ಶನ್ ಸಿನಿಮಾ ಹಾಡಿಗೂ ಜೆಡಿಎಸ್ ಬ್ಯಾನ್ ಮಾಡಿದೆ. 

ರಾಮನಗರ [ಜು.28]:  ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಸಿಟ್ಟನ್ನು ಜೆಡಿಎಸ್ಸಿಗರು ಇನ್ನೂ ಮರೆತಂತೆ ಕಾಣುತ್ತಿಲ್ಲ. ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ‘ಜೋಡೆತ್ತು’ಗಳಂತೆ ದುಡಿದಿದ್ದ ನಟರಾದ ದರ್ಶನ್‌, ಯಶ್‌ ಮೇಲೆ ಮುನಿಸಿಕೊಂಡಿದ್ದ ಜೆಡಿಎಸ್ಸಿಗರು, ಈಗ ರಾಮನಗರದಲ್ಲಿ ನಡೆದ ರಸಸಂಜೆ ಕಾರ್ಯಕ್ರಮದಲ್ಲೂ ಈ ಇಬ್ಬರು ನಟರ ಚಿತ್ರಗೀತೆಗಳಿಗೆ ನಿಷೇಧ ಹೇರಿ ಮತ್ತೊಮ್ಮೆ ತಮ್ಮ ಆಕ್ರೋಶ ಪ್ರದರ್ಶಿಸಿದ್ದಾರೆ!

ರಾಮನಗರದ ಚಾಮುಂಡೇ​ಶ್ವರಿ ಕರಗ ಮಹೋ​ತ್ಸವ ಪ್ರಯುಕ್ತ ಜೆಡಿ​ಎಸ್‌ ಪಕ್ಷದಿಂದ ನಗ​ರದ ಜಿಲ್ಲಾ ಕ್ರೀಡಾಂಗ​ಣ​ದಲ್ಲಿ ಮಂಗ​ಳ​ವಾರ (ಜು.23) ರಾತ್ರಿ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಹಾಗೂ ಅರ್ಜುನ್‌ ಜನ್ಯ ನೇತೃತ್ವದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು. ಎಚ್‌.ಡಿ.ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದರ್ಶನ್‌ ಮತ್ತು ಯಶ್‌ ಅಭಿನಯಿಸಿದ ಚಿತ್ರದ ಗೀತೆಗಳನ್ನು ಹಾಡಲೇಬಾರದೆಂದು ಆಯೋಜಕರೇ ತಾಕೀತು ಮಾಡಿದ್ದರು ಎನ್ನುವ ವಿಚಾರ ಇದೀಗ ತಡವಾಗಿ ಬಹಿ​ರಂಗ​ಗೊಂಡಿದೆ.

ಅದರಂತೆ ಕಾರ್ಯಕ್ರಮ ಆರಂಭಗೊಂಡು ಸುಮಾರು ಹೊತ್ತು ಕಳೆದರೂ ದರ್ಶನ್‌ ಮತ್ತು ಯಶ್‌ ಅಭಿನಯದ ಚಿತ್ರಗಳ ಹಿಟ್‌ಹಾಡುಗಳನ್ನು ಹಾಡದಿದ್ದಾಗ ​ಅಭಿಮಾನಿಗಳು ಡಿ-ಬಾಸ್‌, ಡಿ- ಬಾಸ್‌, ರಾಕಿ ಭಾಯ್‌, ರಾಕಿ ಭಾಯ್‌ ಎಂದು ಬೇಡಿಕೆಯ ಕೂಗು ಹಾಕುತ್ತಿದ್ದರು. ಆದರೆ, ಆಯೋಜಕರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಈ ನಟರಿಬ್ಬರ ಚಿತ್ರದ ಗೀತೆ ಹಾಡುವ ಧೈರ್ಯ ಯಾರೂ ತೋರಲಿಲ್ಲ.

ಅಭಿಮಾನಿಗಳ ಬೇಡಿಕೆ ಮುಗಿಲು ಮುಟ್ಟುತ್ತಿದ್ದಂತೆ ಖುದ್ದು ನಿರೂ​ಪ​ಕಿ ಅನುಶ್ರೀ ‘ನೀವು ನಮ್ಮ ಕಷ್ಟಅರ್ಥ ಮಾಡಿ​ಕೊಳ್ಳಿ ಪ್ಲೀಸ್‌..’ ಎಂದು ಮನವಿ ಮಾಡು​ತ್ತಲೇ ಇ​ದ್ದ​ರು. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಅಭಿಮಾನಿಗಳು ಮಾತ್ರ ಹೆಚ್ಚೆಚ್ಚು ಕೂಗು ಹಾಕುತ್ತಲೇ ಇದ್ದರು. ಆದರೂ ಯಶ್‌, ದರ್ಶನ್‌ ಚಿತ್ರದ ಹಾಡು ಹಾಡದಿರುವುದು ಇಬ್ಬರೂ ನಟರ ಅಭಿ​ಮಾ​ನಿ​ಗಳ ಆಕ್ರೋ​ಶಕ್ಕೆ ಕಾರ​ಣ​ವಾಯಿತು. ಈ ಕುರಿತು ಈಗ ದರ್ಶನ್‌ ಅಭಿ​ಮಾ​ನಿ​ಗಳು ಸಾಮಾಜಿಕ ತಾಣಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಸುಮ​ಲತಾ ಅಂಬರೀಷ್‌ ವಿರುದ್ಧ ಜೆಡಿ​ಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ದರ್ಶನ್‌ ಮತ್ತು ಯಶ್‌ ಅವರು ಅಬ್ಬರದ ಪ್ರಚಾರ ನಡೆಸಿದ್ದೂ ಒಂದು ಕಾರಣ ಎನ್ನು​ವ ಭಾವನೆ ಜೆಡಿ​ಎಸ್ಸಿಗರಲ್ಲಿತ್ತು. ಹೀಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ನಟರಿಬ್ಬರ ವಿರುದ್ಧ ಪದೇ ಪದೆ ತಮ್ಮ ಆಕ್ರೋಶ ಹೊರಹಾಕುತ್ತಿದ್ದರು.

click me!