
ಮುಂಬೈ(ಆ.09): ವಾಣಿಜ್ಯ ನಗರಿ ಮುಂಬೈನಲ್ಲೂ ಚಂಡೀಗಢದ ವರ್ಣಿಕಾ ಕುಂದು ಮಾದರಿಯ ಕಾಮಚೇಷ್ಟೆ ಘಟನೆ ನಡೆದಿದೆ. ಫ್ಯಾಷನ್ ಡಿಸೈನರ್ ಅದಿತಿ ನಾಗಪಾಲ್ ಅವರನ್ನು ಹಿಂಬಾಲಿಸಿಕೊಂಡು ರಾತ್ರಿ 2 ಗಂಟೆಗೆ ಅವರ ಮನೆ ಬಾಗಿಲು ಬಡಿದ ಸಾಫ್ಟ್'ವೇರ್ ತಂತ್ರಜ್ಞರೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಫೇಸ್ಬುಕ್ನಲ್ಲಿ ಘಟನೆಯ ವಿವರಗಳನ್ನು ಅದಿತಿ ಹಂಚಿಕೊಂಡ ನಂತರ ಎನ್ಕೌಂಟರ್ ಸ್ಪೆಷಲಿಸ್ಟ್ ಎನ್ನಿಸಿಕೊಂಡ ಕನ್ನಡಿಗ ಪೊಲೀಸ್ ಅಧಿಕಾರಿ ದಯಾನಾಯಕ್ ಅವರು ಟೆಕ್ಕಿಯನ್ನು ಬಂಧಿಸಿದ್ದಾರೆ.
ಅದಿತಿ ಅವರು ಲೋಖಂಡ್ವಾಲಾದ ಐಷಾರಾಮಿ ಶಾಸ್ತ್ರಿನಗರ ನಿವಾಸಿ. ವೀರಾ ದೇಸಾಯಿ ರಸ್ತೆಯಲ್ಲಿ ಅದಿತಿ ತಮ್ಮಿಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮರಳುತ್ತಿದ್ದರು. ಆಗ ನಿತೇಶ್ಕುಮಾರ್ ಶರ್ಮಾ (36) ಎಂಬ ವ್ಯಕ್ತಿಯೊಬ್ಬ ಅದಿತಿಯ ಕಾರನ್ನು ಗಮನಿಸಿ ತನ್ನ ಕಾರಿನಲ್ಲಿ ಆಕೆಯನ್ನು ಫಾಲೋ ಮಾಡತೊಡಗಿದ. ಅದಿತಿಯ ಫ್ಲ್ಯಾಟ್ವರೆಗೂ ಬಂದು ರಾತ್ರಿ 2ಕ್ಕೆ ಮನೆಯ ಬೆಲ್ ರಿಂಗ್ ಮಾಡಿದ. ಕೊನೆಗೆ ಅದಿತಿ ಚೀರಿಕೊಂಡ ನಂತರ ಆತ ಅಲ್ಲಿಂದ ಪರಾರಿಯಾದ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಅದಿತಿ ದೂರು ನೀಡಿದ್ದಾರೆ.
ವರ್ಣಿಕಾ ಹಿಂಬಾಲಿಸಿದ್ದ ದೃಶ್ಯ ಪತ್ತೆ
ಹರ್ಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲರ ಮಗ ವಿಕಾಸ್ ಮತ್ತು ಆತನ ಸ್ನೇಹಿತ ಆಷಿಶ್ ಕುಮಾರ್, ಅಧಿಕಾರಿ ಮಗಳು ವರ್ಣಿಕಾಳನ್ನು ವಾಹನದಲ್ಲಿ ಹಿಂಬಾಲಿಸಿದ ಸಿಸಿಟಿವಿ ವಿಡಿಯೋ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವರ್ಣಿಕಾ ಅಭಿಯಾನಕ್ಕೆ ರಮ್ಯಾ ಬೆಂಬಲ ಚಂಡೀಗಢ: ವರ್ಣಿಕಾ ಕುಂಡು ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಪುತ್ರಿ ಶರ್ಮಿಷ್ಠಾ ಮುಖರ್ಜಿ, ಕರ್ನಾಟಕದ ಕಾಂಗ್ರೆಸ್ ನಾಯಕಿ ರಮ್ಯಾ ಇದನ್ನು ಬೆಂಬಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.