
ನವದೆಹಲಿ: ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರ ನಂ.2 ಸ್ಥಾನದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ಅಘೋಷಿತ ಉಪ ಪ್ರಧಾನಮಂತ್ರಿ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆಯೇ?
ಇರಾನ್ನಿಂದ ಕಚ್ಚಾ ತೈಲ ಆಮದಿಗೆ ಅಮೆರಿಕ ನಿರ್ಬಂಧ ಹೇರಿರುವುದರಿಂದ ಉಂಟಾಗಿರುವ ಸಮಸ್ಯೆ ಹಾಗೂ ದೇಶದ ಆರ್ಥಿಕತೆ ಮೇಲಾಗುವ ಪರಿಣಾಮಗಳ ಕುರಿತು ಅಮಿತ್ ಶಾ ಅವರು ಹಿರಿಯ ಸಚಿವರ ಸಭೆಯೊಂದನ್ನು ತಮ್ಮ ಕಚೇರಿಯಲ್ಲಿ ನಡೆಸುವುದರೊಂದಿಗೆ ಇಂತಹದ್ದೊಂದು ಸಂದೇಹ ಮೂಡಿದೆ.
ಸಾಮಾನ್ಯವಾಗಿ ಪ್ರಧಾನಮಂತ್ರಿಗಳಾದವರು ಮಾತ್ರ ಈ ರೀತಿ ಹಿರಿಯ ಸಚಿವರ ಸಭೆಗಳನ್ನು ಕರೆಯುತ್ತಾರೆ. ಆದರೆ ತಮಗೇ ಸಂಬಂಧಿಸದೇ ಇರದ ಇಲಾಖೆಗಳ ಮಂತ್ರಿಗಳ ಜತೆ ಸಭೆ ನಡೆಸುವ ಮೂಲಕ ಅಮಿತ್ ಶಾ ಅವರು ಅಘೋಷಿತ ಉಪಪ್ರಧಾನಿ ರೀತಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಸಭೆ ಸೇರುವುದು ಸರ್ವೇಸಾಮಾನ್ಯ. ಆದರೆ, ಪೆಟ್ರೋಲಿಯಂ, ಹಣದುಬ್ಬರ ಹಾಗೂ ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತು ಗೃಹ ಸಚಿವರು ಸಭೆ ನಡೆಸಿರುವುದು ಅತಿ ಅಪರೂಪದ ಬೆಳವಣಿಗೆಯಾಗಿದ್ದು, ಅಚ್ಚರಿಗೂ ಕಾರಣವಾಗಿವೆ.
ಅಮಿತ್ ಶಾ ಅವರ ಕಚೇರಿಯಲ್ಲಿ ಮಂಗಳವಾರ 1 ತಾಸು ನಡೆದ ಈ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ವಾಣಿಜ್ಯ ಮತ್ತು ರೈಲ್ವೆ ಸಚಿವ ಪೀಯೂಷ್ ಗೋಯಲ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ನೀತಿ ಆಯೋಗದ ಸಿಇಒ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.
ಬಿಜೆಪಿ ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೇರಲು ಹಾಗೂ ಕೇಂದ್ರದಲ್ಲಿ ಮತ್ತೊಮ್ಮೆ ಗದ್ದುಗೆಗೆ ಬರಲು ಅಮಿತ್ ಶಾ ಅವರ ಕೊಡುಗೆ ಸಾಕಷ್ಟಿದೆ. ಆದ ಕಾರಣ ಮೋದಿ ಅವರು ಶಾ ಅವರನ್ನು ಕೇಂದ್ರ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡಿದ್ದಲ್ಲದೆ ನಂ.2 ಹುದ್ದೆಯಾದ ಗೃಹ ಖಾತೆಯನ್ನು ನೀಡಿದ್ದರು. ತನ್ಮೂಲಕ ಸರ್ಕಾರದಲ್ಲಿ ಅಮಿತ್ ಶಾಗೆ ಹೆಚ್ಚಿನ ಹೊಣೆಗಾರಿಕೆ ವಹಿಸಿದ್ದರು. ಈಗ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡುತ್ತಿರುವಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.