
ವಿಶ್ವಸಂಸ್ಥೆ(ಸೆ.25): ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟೀಕೆಗಳ ಸುರಿಮಳೆಗೈದಿದ್ದರೂ, ಪಾಕಿಸ್ತಾನ ತನ್ನದೇ ಆದ ಆರೋಪಗಳನ್ನು ಭಾರತದ ವಿರುದ್ಧವೂ ಮಾಡಿದೆ. ಭಾರತ ‘ಬೇಟೆಗಾರ’ನ ರೀತಿಯಲ್ಲಿ ವರ್ತಿಸುವ ನಡೆಯನ್ನು ಅಳವಡಿಸಿಕೊಂಡಿದೆ ಎಂದು ದೂಷಿಸಿದ ಪಾಕಿಸ್ತಾನ, ಭಾರತದ ಪ್ರಚೋದನಾತ್ಮಕ ಮತ್ತು ಆಕ್ರಮಣಕಾರಿ ಕ್ರಿಯೆಗಳನ್ನು ಅಂತಾರಾಷ್ಟ್ರೀಯ ಸಮುದಾಯ ತಡೆಯಬೇಕು ಎಂದು ಒತ್ತಾಯಿಸಿದೆ.
ತಮ್ಮ ದೇಶದ ವಿವಿಧ ಭಾಗಗಳಲ್ಲಿ ಭಾರತ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ ಆಪಾದಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಭಾರತವೆಂಬುದು ‘ಭಯೋತ್ಪಾದನೆಯ ತಾಯಿ’ ಎಂದು ಅವರು ಟೀಕಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಸುಷ್ಮಾ ಭಾಷಣ ಮಾಡಿದ ಕೆಲವೇ ಹೊತ್ತಿನಲ್ಲಿ ಮಾತನಾಡಿದ ಮಲೀಹಾ ಲೋಧಿ, ಸುಷ್ಮಾರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ‘‘ಭಾರತ ಕದನ ವಿರಾಮ ಉಲ್ಲಂಘನೆಯನ್ನು ಭಾರತ ನಿಲ್ಲಿಸಬೇಕು. ಪಾಕಿಸ್ತಾನದ ವಿರುದ್ಧದ ಭಯೋತ್ಪಾದನಾ ಗುಂಪುಗಳಿಗೆ ಪ್ರಾಯೋಜಕತ್ವ ನಿಲ್ಲಿಸಬೇಕು’ ಎಂದು ಲೋಧಿ ಹೇಳಿದರು.
‘ಭಯೋತ್ಪಾದನೆ ಕುರಿತು ವಿಶ್ವಸಂಸ್ಥೆಯು ವ್ಯಾಖ್ಯಾನ ರೂಪಿಸುವ ಕುರಿತಂತೆ ಸುಷ್ಮಾ ಒತ್ತಾಯಿಸಿದ್ದುದಕ್ಕೆ ಪ್ರತಿಕ್ರಿಯಿಸಿದ ಲೋಧಿ, ‘ಆ ವ್ಯಾಖ್ಯಾನದಲ್ಲಿ ನಾವು ಸರ್ಕಾರಿ ಪ್ರಾಯೋಕತ್ವದ ಭಯೋತ್ಪಾದನೆಯನ್ನು ಸೇರ್ಪಡೆಗೊಳಿಸಬೇಕು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಅಜಿತ್ ದೋವಲ್) ಬಡಾಯಿ ಕೊಚ್ಚಿಕೊಳ್ಳುತ್ತಿರುವಂತೆ, ಭಾರತದ ಗುಪ್ತಚರ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಪಾಕ್ನಲ್ಲಿ ಉಗ್ರವಾದ ನಡೆಯುತ್ತಿದೆ’ ಎಂದು ಆಪಾದಿಸಿದರು.
‘ಭಯೋತ್ಪಾದಕ ಗುಂಪುಗಳನ್ನು ಸೃಷ್ಟಿಸುವ ಮೂಲಕ ಭಯೋತ್ಪಾದನೆ ಯನ್ನು ಭಾರತ ಪ್ರಾಯೋಜಿಸುತ್ತಿದೆ. ಇವೆಲ್ಲವುಗಳಿಂದ ಭಾರತ ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯ ತಾಯಿ ಎಂಬುದು ಸಾಬೀತಾಗುತ್ತದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.