
ನವದೆಹಲಿ(ನ.29): ‘ನವಜೋತ್ ಸಿಂಗ್ ಸಿಧು ಭಾರತದ ಪ್ರಧಾನಿಯಾಗುವವರೆಗೂ ಕಾಯದೇ ಈಗಿನ ಸರ್ಕಾರ ಭಾರತ-ಪಾಕಿಸ್ತಾನ ಮಾತುಕತೆ ಆರಂಭದ ಸಂಬಂಧ ಧನಾತ್ಮಕ ಕ್ರಮ ಕೈಗೊಳ್ಳಲಿ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡಿದ ಆಗ್ರಹವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.
‘ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಈ ಪವಿತ್ರ ಸಂದರ್ಭದಲ್ಲಿ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದು ವಿಷಾದಕರ ಸಂಗತಿ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ವಿಷಯದ ಬಗ್ಗೆ ಸೂಕ್ತವಲ್ಲದ ವೇದಿಕೆಯಲ್ಲಿ ಇಮ್ರಾನ್ ಮಾತನಾಡಿದ್ದು ಖಂಡನಾರ್ಹ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಕಿಡಿಕಾರಿದೆ.
ಇದರ ಬದಲು ಪಾಕಿಸ್ತಾನವು ತನ್ನ ನೆಲದಲ್ಲಿನ ಉಗ್ರರ ಪೋಷಣೆಯನ್ನು ನಿಲ್ಲಿಸಲು ಕ್ರಮ ಜರುಗಿಸಲಿ ಎಂದು ಭಾರತ ಬುದ್ಧಿಮಾತು ಹೇಳಿದೆ.