ನಾನು ಕಾಂಗ್ರೆಸ್ ಸೇರುವುದು ಜೋಕ್ ಆಫ್ ದ ಇಯರ್: ರಘುಪತಿ ಭಟ್

By Suvarna Web DeskFirst Published Nov 9, 2017, 4:05 PM IST
Highlights

ತಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂಬುದಾಗಿ ಹರಡಿಸುವ ಸುದ್ದಿ ಜೋಕ್ ಆಫ್ ದ ಇಯರ್ ಎಂದು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ(ನ.09): ತಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂಬುದಾಗಿ ಹರಡಿಸುವ ಸುದ್ದಿ ಜೋಕ್ ಆಫ್ ದ ಇಯರ್ ಎಂದು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ರಘುಪತಿ ಭಟ್ ಅವರು ನ.19 ರಂದು ಉಡುಪಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತಾರೆ ಎಂದು ಬುಧವಾರ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ಗಳಲ್ಲಿ ವದಂತಿಗಳು ಹರಡುತ್ತಿತ್ತು. ಇದು ಉಡುಪಿಯ ರಾಜಕೀಯ ವಲಯದಲ್ಲಿ ವಿಪರೀತ ಚರ್ಚೆಗೆ, ಅನೇಕ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಕೆಲವರಂತೂ ಸಚಿವ ಪ್ರಮೋದ್ ಅವರು ಬಿಜೆಪಿಗೆ ಸೇರುವ ವದಂತಿಯ ಹಿನ್ನೆಲೆಯಲ್ಲಿ, ರಾಜಕೀಯದಲ್ಲಿ ಅವರ ಕಟ್ಟಾ ವಿರೋಧಿಯಾದ ರಘುಪತಿ ಭಟ್ ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂದೆಲ್ಲಾ ವಾದಿಸಲಾರಂಭಿಸಿದ್ದರು.

ಇದಕ್ಕೆ ತಮ್ಮ ಫೇಸ್‌ಬುಕ್ ಅಕೌಂಟ್'ನಲ್ಲೇ ಪ್ರತಿಕ್ರಿಯಿಸಿರುವ ರಘುಪತಿ ಭಟ್, ಈ ವದಂತಿಗಳೆಲ್ಲೂ ಸುಳ್ಳು ಎಂದು ಹೇಳಿದ್ದಾರೆ. ತಾನೀಗ ಮುಂಜಾನೆಯಿಂದ ರಾತ್ರಿಯ ವರೆಗೆ ಬಿಜೆಪಿಯ ಪರಿವರ್ತನಾ ಯಾತ್ರೆಯ ಯಶಸ್ಸಿಗಾಗಿ ಪಕ್ಷದ ಕಾರ್ಯಕರ್ತರೊಂದಿಗೆ ದುಡಿಯುತ್ತಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು, ರಾಜ್ಯ ಕಾಂಗ್ರೆಸ್ ಮುಕ್ತವಾಗಬೇಕು ಎಂಬ ಉದ್ದೇಶದಿಂದ ಉಡುಪಿಯ ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ಪಕ್ಷದ ಪೂರ್ವಭಾವಿ ಸಭೆಗಳನ್ನು ಸಂಘಟಿಸುವಲ್ಲಿ ವ್ಯಸ್ತನಾಗಿದ್ದೇನೆ. ಪಕ್ಷ ಬಿಡುವ ಬಗ್ಗೆ ಯೋಚಿಸುವಷ್ಟೂ ಸಮಯಾವಕಾಶ ತನಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ವದಂತಿಗಳನ್ನು ಸೃಷ್ಟಿಸಿ ಹರಡುವ ಮೂಲಕ ವಿಪಕ್ಷ ತನ್ನ ಹತಾಶ ಮನೋಭಾವವನ್ನು ತೋರಿಸುತ್ತಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ

click me!