14 ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ಶಾಸಕ ರಾಜೀನಾಮೆ ಬಾಂಬ್ ಸಿಡಿಸಿದ್ದಾರೆ.
ಕೋಲಾರ [ಜು.07] : ಕಾಂಗ್ರೆಸ್ ನ ಮತ್ತೋರ್ವ ಶಾಸಕ ಇದೀಗ ರಾಜೀನಾಮೆ ಬಾಂಬ್ ಸಿಡಿಸಿದ್ದಾರೆ. ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ರಾಜೀನಾಮೆ ಹೇಳಿಕೆ ನೀಡಿದ್ದಾರೆ.
ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ, ನನ್ನ ತಾಲೂಕಿಗೆ ಕೆಸಿವ್ಯಾಲಿ ನೀರು ಹರಿಸದಿದ್ದಲ್ಲಿ ನಾನು ರಾಜೀನಾಮೆ ನೀಡಲು ಸಿದ್ಧ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಸ್ಥಾನದ ತ್ಯಾಗಕ್ಕೆ ರೆಡಿ ಎಂದಿದ್ದಾರೆ.
ಕೆಸಿ ವ್ಯಾಲಿ ಯೋಜನೆ ನೀರು ಮಾಲೂರಿಗೆ ಹರಿಸದೆ ನಾಯಕರು ಮೋಸ ಮಾಡುತ್ತಿದ್ದಾರೆ. ಯೋಜನೆಗೆ ಆರಂಭವಾಗಿ ಹಲವು ತಿಂಗಳಾದರೂ ಕೂಡ ಯಾರಿಗೂ ನೀರು ಹರಿಸುವ ಮನಸ್ಸಿಲ್ಲ. ಸಚಿವ ಕೃಷ್ಣಬೈರೇಗೌಡ 8 ದಿನದಲ್ಲಿ ನೀರು ಬಿಡಿಸುವುದಾಗಿ ಹೇಳಿದ್ದಾರೆ. 8 ದಿನದಲ್ಲಿ 3 ದಿನ ಕಳೆದಿದೆ ಇನ್ನು 5 ದಿನ ನೀರು ಬಿಡದಿದ್ದಲ್ಲಿ ರಾಜೀನಾಮೆ ನೀಡುವುದು ಖಚಿತ ಎಂದಿದ್ದಾರೆ.
ಸರ್ಕಾರದ ವಿರುದ್ಧ ನೇರವಾಗಿ ಬೇಸರ ವ್ಯಕ್ತಪಡಿಸಿದ ಶಾಸಕ ಕೆ.ವೈ ನಂಜೇಗೌಡ, ರಾಜೀನಾಮೆ ನೀಡಿ ಜನರೊಂದಿಗೆ ಸೇರಿ ಹೋರಾಟ ನಡೆಸಲು ತಾವು ಸಿದ್ಧವೆಂದು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಕೆವೈ ನಂಜೇಗೌಡ, ಮೈತ್ರಿ ಸರ್ಕಾರ ಪತನವಾದಲ್ಲಿ ನಾನು ಚುನಾವಣೆಗೆ ಹೋಗಲು ರೆಡಿ ಇದ್ದೇನೆ. ಜನ ಮತ್ತೆ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದ್ದಾರೆ.