
ಬೆಂಗಳೂರು(ನ.09): ರಾಜ್ಯದ ಒಂದೂವರೆ ಲಕ್ಷ ಪದವಿ ವಿದ್ಯಾರ್ಥಿ'ಗಳಿಗೆ ಲ್ಯಾಪ್ಟಾಪ್ ವಿತರಿಸುವ ಉನ್ನತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ 300 ಕೋಟಿ ರು.ಗಳ ಯೋಜನೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಹಿರಿಯ ಐಎಎಸ್ ಅಧಿಕಾರಿ ಅಜಯ್ ನಾಗಭೂಷಣ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದ್ದಾರೆ. 2017-18ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದಿರುವ ಎಲ್ಲ ಜಾತಿ-ಧರ್ಮಗಳ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಪ್ರಕಟಿಸಿದ್ದರು. ಈ ಘೋಷಣೆ ಅನ್ವಯ ಉನ್ನತ ಶಿಕ್ಷಣ ಇಲಾಖೆ ಲ್ಯಾಪ್ಟಾಪ್ ಹಂಚಿಕೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. 2016 - 17ನೇ ಸಾಲಿನಲ್ಲಿ ಕೇವಲ 37 ಸಾವಿರ ದಲಿತ ವಿದ್ಯಾರ್ಥಿಗಳಿಗೆ ಹಂಚಿಕೆಯಾದ ಲ್ಯಾಪ್'ಟಾಪ್ ಯೋಜನೆಯ ಮುಂದುವರಿದ ಯೋಜನೆ ಇದಾಗಿದ್ದು, ಕಳೆದ ವರ್ಷದ ಮಾದರಿಯಲ್ಲೇ ಲ್ಯಾಪ್ಟಾಪ್ ಖರೀದಿಸಬೇಕಿತ್ತು.
ಆದರೆ ಏಕಾಏಕಿ ಪ್ರತಿ ಲ್ಯಾಪ್ಟಾಪ್ ದರವನ್ನು ಹಿಂದಿನ ದರಕ್ಕಿಂತ 10 ಸಾವಿರ ರು. ಗಳಷ್ಟು ಹೆಚ್ಚಳ ಮಾಡಿದ್ದಲ್ಲದೇ ಒಂದೂವರೆ ಲಕ್ಷ ಲ್ಯಾಪ್ಟಾಪ್ ಖರೀದಿಯನ್ನು ನಾಲ್ಕು ಭಾಗಗಳಾಗಿ ತುಂಡು ಗುತ್ತಿಗೆ ಮೂಲಕ ಖರೀದಿ ಸಲು ಉನ್ನತ ಶಿಕ್ಷಣ ಇಲಾಖೆ ಕಡತ ಮಂಡಿಸಿತು. ಆಗ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಡಾ.ಎಂ.ಎನ್.ಅಜಯ್ ನಾಗಭೂಷಣ್, ‘ಈ ಪ್ರಕ್ರಿಯೆ ಸರಿಯಿಲ್ಲ. ಹೀಗಾಗಿ ಇಡೀ ಟೆಂಡರ್ ಪ್ರಕ್ರಿಯೆ ತಡೆಯಿರಿ’ ಎಂದು ಸರ್ಕಾರಕ್ಕೆ ಪತ್ರ ಬರೆದರು. ಆದರೂ ಟೆಂಡರ್ ಪ್ರಕ್ರಿಯೆಗೆ ಸರ್ಕಾರ ತಡೆ ನೀಡದ ಕಾರಣ, ಆಯುಕ್ತ ಅಜಯ್ ನಾಗಭೂಷಣ್ ಕಡತಕ್ಕೆ ಸಹಿ ಹಾಕಲಿಲ್ಲ. ಇದರ ಬೆನ್ನಲ್ಲೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಹುದ್ದೆಯಿಂದ ಡಾ. ಅಜಯ್ರನ್ನು ಎತ್ತಂಗಡಿ ಮಾಡಲಾಯಿತು. ಹೀಗಾಗಿ ಮನನೊಂದ ಡಾ.ಅಜಯ್ ನಾಗಭೂಷಣ್ ಉನ್ನತ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಲ್ಯಾಪ್ಟಾಪ್ ಹಗರಣ ಸೇರಿದಂತೆ ಹಲವು ಅಕ್ರಮಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರಿಗೆ ದಾಖಲೆಗಳ ಸಹಿತ ಸುದೀರ್ಘ ಪತ್ರ ಬರೆದಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಪತ್ರದಲ್ಲಿ ಏನಿದೆ?
ಸದ್ಯ ಸಕ್ಕರೆ ಆಯುಕ್ತರಾಗಿರುವ ಡಾ.ಅಜಯ್ ಉನ್ನತ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಸುದೀರ್ಘ ಪತ್ರ ಬರೆದಿದ್ದಾರೆ. ಅದರಲ್ಲಿ-‘‘2016-17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಪಂಗಡದ 14,692 ರು.ಗಳಿಗೆ ಒಂದರಂತೆ 37 ಕೋಟಿ ರು.ಗಳ ವೆಚ್ಚದಲ್ಲಿ 26,790 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಖರೀದಿಸಲಾಗಿತ್ತು. ಈ ವರ್ಷ 2017-18ನೇ ಸಾಲಿಗೆ ಪರಿಶಿಷ್ಟರ ಜತೆಗೆ ಎಲ್ಲ ಜಾತಿಗಳ ವಿದ್ಯಾರ್ಥಿ ಗಳಿಗೆ 1.5 ಲಕ್ಷ ಪ್ಟಾಪ್ ಖರೀದಿಸಲು ಇಲಾಖೆ ಮುಂದಾಗಿದೆ. ಈ ವೇಳೆ ಹಿಂದಿನ ವರ್ಷದ ಗುಣಮಟ್ಟದ ಲ್ಯಾಪ್ಟಾಪ್ಗಳ ಖರೀದಿಗೆ ಹಿಂದಿನ ವರ್ಷದ ದರಕ್ಕಿಂತ 10 ಸಾವಿರ ರು.ಗಳ ಹೆಚ್ಚಿನ ದರ ನಿಗದಿಪಡಿಸಲಾಗುತ್ತಿದೆ. ಅಲ್ಲದೇ ಒಂದೂವರೆ ಲಕ್ಷ ಲ್ಯಾಪ್ ಟಾಪ್ಗೆ ಕೆಟಿಟಿಪಿ ಕಾಯ್ದೆಯ ಅನ್ವಯ ಒಂದೇ ಟೆಂಡರ್ ಕರೆ ಯುವ ಬದಲಾಗಿ 4 ತುಂಡು ಗುತ್ತಿಗೆ ಮಾಡಲು ಕಡತ ಮಂಡಿಸಲಾಗಿದೆ. ಅದರಲ್ಲೂ ಉಪ ಕಾರ್ಯದರ್ಶಿ ದರ್ಜೆಯ ಅಧಿಕಾರ ತಮಗೆ ಕಡತ ಮಂಡಿಸಿದ್ದು, ಖಾಸಗಿ ವ್ಯಕ್ತಿಗೆ ಸೇರಿದ ಸಂಸ್ಥೆಯಿಂದ ಖರೀದಿಸುವ ಪ್ರಸ್ತಾವ ಇದೆ’’ ಎಂದು ವಿವರಿಸಲಾಗಿದೆ. ಈ ರೀತಿಯ ತುಂಡು ಗುತ್ತಿಗೆ ಮಾಡುವುದ ರಿಂದ ಲ್ಯಾಪ್ಟಾಪ್ ಕಂಪನಿಗಳು ದೊಡ್ಡ ಸಂಖ್ಯೆಯ ವಸ್ತುಗಳ ಖರೀದಿ ಮೇಲೆ ನೀಡುವ ಶೇ.50ರವರೆಗಿನ ಡಿಸ್ಕೌಂಟ್ ಕೂಡ ಸರ್ಕಾರಕ್ಕೆ ತಪ್ಪಿ ಹೋಗಲಿದೆ. ಸರ್ಕಾರಕ್ಕೆ ಆಗಬಹುದಾದ ಅನುಕೂಲಕ್ಕಿಂತ ಹೆಚ್ಚುವರಿ ವೆಚ್ಚವಾಗುವ ಪ್ರಕ್ರಿಯೆ ನಡೆಸುವಂತೆ ಕೆಲ ಶಕ್ತಿಗಳು ಒತ್ತಡ ಹೇರುತ್ತಿವೆ. ಇದನ್ನು ಒಪ್ಪದ್ದಕ್ಕೆ ಕೆಲವರು ವೃಥಾ ಆರೋಪ ಮಾಡಿ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದೂ ತಿಳಿಸಲಾಗಿದೆ.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.