
ನವದೆಹಲಿ: ರಣರಂಗದ ಹೊರಗೆ ಯೋಧನೋರ್ವನ ಅಪ್ರತಿಮ ಶೌರ್ಯ, ಸಾಹಸ ಮತ್ತು ತ್ಯಾಗಕ್ಕಾಗಿ ಭಾರತೀಯ ಸೇನಾ ಯೋಧರಿಗೆ ನೀಡಲಾಗುವ ಅಶೋಕ ಚಕ್ರ ಪ್ರಶಸ್ತಿಗೆ ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಉಗ್ರರನ್ನು ತಾವೊಬ್ಬರೇ ಹುಟ್ಟಡಗಿಸಿದ ಭಾರತೀಯ ವಾಯು ಪಡೆಯ ಗರುಡ್ ವಿಶೇಷ ಪಡೆಯ ಹುತಾತ್ಮ ಯೋಧ ಜ್ಯೋತಿ ಪ್ರಕಾಶ್ ನಿರಾಲಾ ಅವರು ಭಾಜನರಾಗಿದ್ದಾರೆ.
ಕಳೆದ ವರ್ಷದ ಜಮ್ಮು-ಕಾಶ್ಮೀರದ ಹಜಿನ್ ಪ್ರದೇಶದಲ್ಲಿ 26/11 ಮುಂಬೈ ದಾಳಿ ರೂವಾರಿ ಝಾಕೀರ್ – ರೆಹಮಾನ್ ಲಖ್ವಿಯ ಸೋದರ ಸಂಬಂಧಿ ಓವೈದ್ ಅಲಿಯಾಸ್ ಒಬಾಮ ಮತ್ತು ಇತರ ಉಗ್ರರನ್ನು ಐಎಎಫ್ ಯೋಧ ಜ್ಯೋತಿ ಪ್ರಕಾಶ್ ನಿರಾಲಾ ಗುಂಡಿಟ್ಟು ಹತ್ಯೆಗೈದಿದ್ದರು.
ಈ ವೇಳೆ ಉಗ್ರರ ಗುಂಡಿನ ದಾಳಿ ಯಿಂದ ನಿರಾಲಾ ಹುತಾತ್ಮರಾಗಿದ್ದರು. ಬಿಹಾರದ ರೋಹ್ಟಸ್ ಜಿಲ್ಲೆಯವರಾದ ನಿರಾಲಾ 2005ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದರು. ಇದೇ ವೇಳೆ ಕಳೆದ ವರ್ಷ ಉರಿ ಭಯೋತ್ಪಾದಕ ದಾಳಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ್ದ ಮೇಜರ್ ವಿಜಯಂತ್ ಬಿಸ್ತ್ ಅವರಿಗೆ ಕೀರ್ತಿ ಚಕ್ರ ನೀಡಿ ಗೌರವಿಸಲಾಗಿದೆ.
ಅಲ್ಲದೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 69ನೆ ಗಣರಾಜ್ಯೋತ್ಸವದ ಮುನ್ನಾದಿನ ದೇವೇಂದ್ರ, ಮಿಲಿಂದ್, ನೀಲೇಶ್ ಸೇರಿದಂತೆ 14 ಮಂದಿಗೆ ಶೌರ್ಯ ಚಕ್ರ, 28 ಪರಮ ವಿಶಿಷ್ಟ ಸೇವಾ ಪದಕ, ನಾಲ್ಕು ಉತ್ತಮ ಯುದ್ಧ ಸೇವಾ ಪದಕಗಳು, 2 ಅತಿ ವಿಶಿಷ್ಟ ಸೇವಾ ಪದಕಗಳು, 86 ಸೇನಾ ಪದಕಗಳು ಸೇರಿದಂತೆ ಒಟ್ಟು 390 ಪದಕಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.